ಬಾಗಲಕೋಟೆ: ಬಾಗಲಕೋಟೆಗೆ ಘೋಷಣೆಗೊಂಡಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ, ಯುಕೆಪಿ ಅನುಷ್ಠಾನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷ ಹಾಗೂ ಕರ್ನಾಟಕ ರಕ್ಷಾ ವೇದಿಕೆಗಳು ಜಂಟಿಯಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿವೆ.
ಜಿಲ್ಲಾಡಳಿತ ಭವನದೆದುರು ಧರಣಿ ಆರಂಭಿಸಿರುವ ಎರಡು ಸಂಘಟನೆಗಳ ಪದಾಧಿಕಾರಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದವು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಆಪ್ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಸತ್ಯಾಗ್ರಹದ ಮೂಲಕ ಗಾಂಧೀಜಿ ಅವರು ಸ್ವಾತಂತ್ರ್ಯ ತಂದು ಕೊಟ್ಟರು. ಅವರ ಜಯಂತಿ ಎಂದ್ದೇ ನಾವೂ ಧರಣಿ ನಡೆಸುತ್ತಿದ್ದೇವೆ.ನ್ಯಾಯ ಸಿಗೋವರೆಗೂ ಹೋರಾಡುತ್ತೇವೆ ಎಂದು ಹೇಳಿದರು.
ಯುಕೆಪಿ ಸಂತ್ರಸ್ತರಿಗೆ ಸರ್ಕಾರ ನ್ಯಾಯ ಒದಗಿಸಬೇಕು. ಉದ್ಯೋಗ ಸೃಷ್ಠಿಗೆ ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆ ಆಕರ್ಷಿಸಲು ವಿಶೇಷ ಆರ್ಥಿಕ ವಲಯ(ಎಸ್ಇಜೆಡ್) ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ ಆಗಿದೆ. ಆದರೆ ಜನಪ್ರತಿನಿಧಿಗಳ ಇಚ್ಛಾಕೊರತೆಯಿಂದಾಗಿ ಅದು ಸ್ಥಾಪನೆ ಆಗುತ್ತಿಲ್ಲ.ಅದು ಸ್ಥಾಪನೆ ಆಗುವವರೆಗೂ ನಾವು ಸಮ್ಮನಾಗುವುದಿಲ್ಲ ಎಂದು ಹೇಳಿದರು.


























