ಮೂಡಲಗಿ: ಮೂಡಲಗಿ ಮತ್ತು ಗೋಕಾಕ ತಾಲೂಕುಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿ ರೈತರ ಬೆಳೆಗಳು ಸಮೃದ್ಧಿಯಾಗಿ ರೈತನ ಮೊಗದಲ್ಲಿ ಸಂತಸ ಮೂಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಮಂಗಳವಾರ ಸಂಜೆ ತಾಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಅವರು, ಮಳೆಯಾಗಿ ಇಡೀ ನಾಡು ಹಸಿರಿನಿಂದ ಕಂಗೊಳಿಸಲಿ ಎಂದು ಪ್ರಾರ್ಥನೆ ಮಾಡಿದರು.
ಇಲ್ಲಿಯ ತನಕ ಸಮರ್ಪಕ ಮಳೆಯಾಗದೇ ಇರುವುದರಿಂದ ಕುಡಿಯುವ ನೀರು ಸಮಸ್ಯೆಯಾಗಿ ಪರಿಣಮಿಸಿದೆ. ಜುಲೈ 4ರತನಕ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದರೆ ಟ್ಯಾಂಕರಗಳ ಮೂಲಕ ನೀರನ್ನು ಸರಬರಾಜು ಮಾಡುವಂತೆಯೂ ಸೂಚಿಸಲಾಗಿದೆ ಎಂದರು.
ಜೂನ್ 1ರಿಂದ 26 ರವರೆಗೆ 57 ಎಂಎಂ ಮಳೆ ಆಗಬೇಕಿತ್ತು. ಆದರೆ ಕೇವಲ 14 ಎಂಎಂ ಮಾತ್ರ ಮಳೆಯಾಗಿದ್ದು, ಇದರಿಂದ ಪ್ರತಿಶತ 76ರಷ್ಟು ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಇದರಿಂದ ಬಿತ್ತನೆ ಕಾರ್ಯಗಳು ಕೇವಲ 1.5% ಮಾತ್ರ ನಡೆದಿವೆ. ಕಬ್ಬು, ಗೋವಿನಜೋಳ, ಸೋಯಾಬಿನ್, ಸೂರ್ಯಕಾಂತಿ ಬೆಳೆಗಳು ಮಳೆಯ ಅಭಾವದಿಂದ ಬಿತ್ತನೆ ಆಗಿರುವುದಿಲ್ಲ. ಬೆಳೆಗಳಿಗೆ ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ನೀರು ಸಹ ಬತ್ತಿರುತ್ತದೆ. ಅಂತರ್ಜಲ ಮಟ್ಟ ಕುಸಿತಗೊಂಡಿದ್ದರಿಂದ ನದಿ, ಕಾಲುವೆ, ಹಳ್ಳಗಳಲ್ಲಿ ನೀರು ಸಹ ಇರುವುದಿಲ್ಲ. ಕಬ್ಬಿನ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಕೌಜಲಗಿ, ಅರಭಾವಿ ಮತ್ತು ಗೋಕಾಕ ಹೋಬಳಿಗಳಲ್ಲಿ ಬೆಳೆಗಳು ಸಂಪೂರ್ಣವಾಗಿ ಬಾಡಿ ರೈತನು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾನೆ. ಕೂಡಲೇ ಸರ್ಕಾರ ಮೂಡಲಗಿ ಮತ್ತು ಗೋಕಾಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಗ್ರಹಿಸಿದರು.
ಜುಲೈ 4ರಿಂದ ಮತ್ತೇ ಮಳೆಯಾಗದಿದ್ದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯು ಮತ್ತಷ್ಟು ಹದಗೆಡಲಿದೆ. ಆದ್ದರಿಂದ ಸರ್ಕಾರ ಕುಡಿಯುವ ನೀರಿಗಾಗಿಯೇ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಜೊತೆಗೆ ಉಭಯ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಕೂಡಲೇ ಘೋಷಿಸುವಂತೆ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಸಗುಪ್ಪಿ ಗ್ರಾಮದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅಹವಾಲುಗಳನ್ನು ಸ್ವೀಕರಿಸಿದರು.