ಕಲಬುರಗಿ: ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಿಗದಿತ ಸಮಯಕ್ಕೆ ಮತದಾನ ಆರಂಭಗೊಂಡಿದ್ದು, ಜನರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಲು ಬರುತ್ತಿದ್ದಾರೆ.
ಕಲಬುರಗಿ ಸಂಸದ ಡಾ.ಉಮೇಶ ಜಾಧವ, ಅವರ ಪುತ್ರ ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ ಜಾಧವ ಕಾಳಗಿ ತಾಲ್ಲೂಕಿನ ಬೆಡಸೂರು ತಾಂಡಾದ ಶಾಲೆಯಲ್ಲಿ ಆರಂಭಿಸಲಾದ ಮತಗಟ್ಟೆಯಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಹಕ್ಕು ಚಲಾಯಿಸಿದರು.
ಸೇಡಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೇಲ್ಕೂರ ಸೇಡಂನಲ್ಲಿ ಮತದಾನ ಮಾಡಿದರು.
ಕಾಳಗಿ ತಾಲ್ಲೂಕಿನ ಧುತ್ತರಗಾದಲ್ಲಿ ಇವಿಎಂ ದೋಷದಿಂದಾಗಿ ಮತದಾನ ಸ್ಥಗಿತಗೊಂಡಿದೆ. ಗೋಟೂರು, ಗೊಣಗಿ, ರಟಕಲ್ ಗ್ರಾಮಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತದಾನ ಮಾಡಲು ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಕಲಬುರಗಿಗೆ ಮಧ್ಯಾಹ್ನ ಬರಲಿದ್ದಾರೆ.