ಬಾಗಲಕೋಟೆ: ಮಳೆರಾಯನನ್ನು ಎದುರು ನೋಡುತ್ತಿರುವ ಜನರಲ್ಲಿ ಮತ್ತಷ್ಟು ಬಿಸಿಲಿನ ತಾಪವೇ ಕಾಣುತ್ತಿರುವ ಹಿನ್ನಲೆ ನೀರಿನ ಅಭಾವದ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಇದೀಗ ಉತ್ತರ ಕರ್ನಾಟಕದ ಜೀವ ಜಲವಾಗಿದ್ದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ಹಿಪ್ಪರಗಿ ಜಲಾಶಯ ಪೂರ್ತಿಯಾಗಿ ಖಾಲಿಯಾಗಿದೆ.
ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. 6 ಟಿಎಂಸಿ ಸಾಮರ್ಥ್ಯವುಳ್ಳ ಹಿಪ್ಪರಗಿ ಜಲಾಶಯದ ಹಿಂಭಾಗದಲ್ಲಿ ಓಯಾಸಿಸ್ನಂತೆ ಸ್ವಲ್ಪವೇ ನೀರು ಉಳಿದಿದ್ದು, ಮುಂಭಾಗ ಮಾತ್ರ ಪೂರ್ಣವಾಗಿ ಖಾಲಿಯಾಗಿದ್ದು ಈ ಭಾಗದ ಜನರು ಮತ್ತು ರೈತರಿಗೆ ಚಿಂತೆಯನ್ನುಂಟು ಮಾಡಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಇನ್ನೂ ಮಳೆ ಪ್ರಾರಂಭವಾಗಿಲ್ಲವಾದ್ದರಿಂದ ಮಹಾರಾಷ್ಟ್ರದ ಕೋಯ್ನಾ ಮತ್ತು ರಾಜಾಪುರ ಡ್ಯಾಂಗಳಿಂದ ಈ ವರ್ಷ ನೀರು ಇನ್ನೂ ಬಿಟ್ಟಿಲ್ಲ. ಹೀಗಾಗಿ ಕೃಷ್ಣಾ ನದಿ ಬತ್ತಿ ನಿಂತಿದೆ.
ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬೀಡಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ವ್ಯವಹಾರಗಳು ನಡೆದಿದ್ದು, ಆದಷ್ಟು ಬೇಗನೆ ನೀರು ಬರುತ್ತದೆ ಎಂಬ ನಂಬಿಕೆ ಜನರದ್ದಾಗಿದೆ.