ಬೆಂಗಳೂರು: ಕನ್ನಡ ಚಲನಚಿತ್ರರಂಗವು ಚಿತ್ರಮಂದಿರಗಳ ಕೊರತೆ, ಓಟಿಟಿ ಪ್ಲಾಟ್ಫಾರ್ಮ್ಗಳ ವಿಸ್ತರಣೆ ಸೇರಿದಂತೆ ಈ ಸಮಯದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಸರ್ಕಾರ ಚಿತ್ರರಂಗಕ್ಕೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಸೂಕ್ತ ಅಧ್ಯಯನ ಮಾಡಿ ಅಗತ್ಯ ನೆರವು ನೀಡಲು ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಕಲಾವಿದರ ಸಂಘವು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿ “ಕನ್ನಡ ಚಿತ್ರರಂಗ ಕಳೆದ ಕೆಲವು ವರ್ಷಗಳಲ್ಲಿ ಭಾರಿ ಬೆಳವಣಿಗೆಯನ್ನು ಸಾಧಿಸಿದೆ. ಬಾಲಿವುಡ್ಗೆ ಸಮಾನವಾಗಿ ಸ್ಪರ್ಧಿಸುತ್ತಿದೆ.
ಈ ಸ್ಥಾನಮಾನವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಆದರೆ ಚಿತ್ರಮಂದಿರಗಳ ಕೊರತೆ, ಓಟಿಟಿ ಪ್ಲಾಟ್ಫಾರ್ಮ್ಗಳ ವಿಸ್ತರಣೆ ಮತ್ತು ವಾಣಿಜ್ಯ ಸವಾಲುಗಳು ಚಿತ್ರರಂಗವನ್ನು ಕಂಗೆಡಿಸುತ್ತಿವೆ.
ಈ ಸಮಸ್ಯೆಗಳನ್ನು ನಿವಾರಿಸಲು ಹಿರಿಯರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯವರು ಅಧ್ಯಯನ ನಡೆಸಿ ವರದಿ ನೀಡಿದಲ್ಲಿ, ಅದರ ಆಧಾರದ ಮೇಲೆ ಸರ್ಕಾರ ಚಿತ್ರರಂಗದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲಿದೆ,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಹಿರಿಯ ನಟ ಅನಂತನಾಗ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದ ಹಾಸನ ರಘು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಮಾಜಿ ಸಚಿವೆ ಜಯಮಾಲ, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ನಟ ಮತ್ತು ನಿರ್ದೇಶಕ ರವಿಚಂದ್ರನ್, ನಿರ್ಮಾಪಕರು ರಾಕ್ಲೈನ್ ವೆಂಕಟೇಶ್ ಹಾಗೂ ಕೆ. ಮಂಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
