ವಿಜಯಪುರ: ನಮ್ಮ ಶಕ್ತಿ ಬಿಜೆಪಿಗೆ ಧಾರೆ ಎರೆದಿದ್ದೇವೆ, ಬಿಜೆಪಿ ಶಕ್ತಿ ನಮಗೆ ಧಾರೆ ಎರೆದಿದ್ದಾರೆ. ಭ್ರಷ್ಟ ಕಾಂಗ್ರೆಸ್ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತಿದ್ದೇವೆ. ಹೀಗಾಗಿ ವಿಲೀನವಾಗುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮೈತ್ರಿಯ ವಿಮಾನ ಹತ್ತಿದ್ದೇವೆ, ಅದು ಟರ್ಬ್ಯೂಲೆನ್ಸ್ ಆಗುವುದು ಸಹಜ, ಮಧ್ಯದಲ್ಲಿ ಕೆಲವು ಪ್ರಯಾಣಿಕರು ಇಳಿಯುವಂತೆ ಹೇಳಿದರೆ ಅದು ಸಾಧ್ಯವಾಗದು. ಜೆಡಿಎಸ್ ಸೈದ್ಧಾಂತಿಕವಾಗಿ ರಾಜೀಯಾಗಿಲ್ಲ, ಸೆಕ್ಯೂಲರಿಸಂ ನಮ್ಮ ಹೃದಯಲ್ಲಿದೆ ಎಂದು ಹೇಳಿದರು.
ಕೆಲವೊಂದು ಅಸಮಾಧಾನ ಬರಬಹುದು, ಅದನ್ನು ವರಿಷ್ಠರು ಸಮಾಧಾನ ಮಾಡುತ್ತಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಅವರು ಸರಿಪಡಿಸುತ್ತಾರೆ ಎಂದರು.























