ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆಯಲಿರುವ ಶ್ರೀ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರಿಗೆ ಮಹತ್ವದ ಸೌಲಭ್ಯ ಕಲ್ಪಿಸಲಾಗಿದೆ. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಲಚ್ಯಾಣ ರೈಲು ನಿಲ್ದಾಣದಲ್ಲಿ ಏಪ್ರಿಲ್ 5 ರಿಂದ ಏಪ್ರಿಲ್ 12, 2026ರವರೆಗೆ ಕೆಲವು ಪ್ರಮುಖ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯಾವ ರೈಲುಗಳಿಗೆ ನಿಲುಗಡೆ? : ಈ ಅವಧಿಯಲ್ಲಿ ಕೆಳಗಿನ ರೈಲುಗಳು ಲಚ್ಯಾಣದಲ್ಲಿ ನಿಲುಗಡೆಯಾಗಲಿವೆ. ಮೈಸೂರು–ಬಾಗಲಕೋಟೆ–ಮೈಸೂರು ಬಸವ ಎಕ್ಸ್ಪ್ರೆಸ್ (17307/17308), ಮೈಸೂರು–ಪಂಡರಾಪುರ–ಮೈಸೂರು ಎಕ್ಸ್ಪ್ರೆಸ್ (16535/16536) ಭಕ್ತರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.
ಜಾತ್ರೆಯ ಧಾರ್ಮಿಕ ಮಹತ್ವ : ಲಚ್ಯಾಣ ಗ್ರಾಮವು ಶ್ರೀ ಶಂಕರಲಿಂಗೇಶ್ವರರ ಪವಿತ್ರ ಕ್ಷೇತ್ರವಾಗಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವವನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಗುರು ಲಿಂಗೈಕ್ಯ ಶ್ರೀ ಶಂಕರಲಿಂಗೇಶ್ವರ ಮಹಾಶಿವಯೋಗಿಗಳ ಸ್ಮರಣಾರ್ಥ ನಡೆಯುವ ಈ ಉತ್ಸವಕ್ಕೆ ಸಾವಿರಾರು ಭಕ್ತರು ಸೇರುತ್ತಾರೆ.
ಮೂಲಾ ನಕ್ಷತ್ರದ ಶುಭ ಮುಹೂರ್ತದಲ್ಲಿ ನಡೆಯುವ ಮಹಾರಥೋತ್ಸವ ಈ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ.
ಭಕ್ತರ ಅನುಕೂಲಕ್ಕೆ ಕ್ರಮ : ಜಾತ್ರೆಯ ವೇಳೆ ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ, ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ರೈಲ್ವೆ ಇಲಾಖೆ ಈ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಮಾಡಿದೆ. ಇದರಿಂದ ದೂರದ ಪ್ರದೇಶಗಳಿಂದ ಬರುವ ಭಕ್ತರಿಗೆ ಪ್ರಯಾಣ ಸುಲಭವಾಗಲಿದೆ.























