ವಿಜಯಪುರ: ಮಹಾರಾಷ್ಟ್ರದ ಉಜಣಿ ಜಲಾಶಯದಿಂದ ಏಕಾಏಕಿ ಒಂದು ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಟ್ಟಿರುವ ಪರಿಣಾಮವಾಗಿ ಭೀಮೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ಭೀಮಾನದಿ ತೀರದ ಆಲಮೇಲ ತಾಲೂಕಿನ ಸುಮಾರು 33 ಹಳ್ಳಿಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು ಪ್ರಸ್ತುತ 9 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ.
ಆಲಮೇಲ ತಾಲೂಕಿನ ತಾರಾಪುರ ಗ್ರಾಮಕ್ಕೆ ನೀರು ಸುತ್ತುವರಿದಿದ್ದು ಇನ್ನುಳಿದಂತೆ ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಭೇವಾಡ, ಕುಮಸಗಿ, ಚಿಕ್ಕವಳಗಿ, ಬಗಲೂರು ಗ್ರಾಮಗಳಲ್ಲಿ ಆತಂಕದ ಪರಿಸ್ಥಿತಿ ಇದೆ.
ಭೀಮಾನದಿಗೆ ಅಡ್ಡಲಾಗಿ ಮಹಾರಾಷ್ಟ್ರ ಸುಮಾರು 50ಕ್ಕೂ ಹೆಚ್ಚು ಅನಧಿಕೃತ ಜಲಾಶಯಗಳನ್ನು ನಿರ್ಮಿಸಿಕೊಂಡಿದ್ದು, ಮಳೆ ಹೆಚ್ಚಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿ ಉಜಣಿ ಅಣೆಕಟ್ಟಿಗೆ ನೀರು ಹರಿದು ಬಂದು ಭರ್ತಿಯಾದಾಗ ಏಕಾಏಕಿ ಎಲ್ಲ ಗೇಟ್ಗಳನ್ನು ತೆರೆದು ನದಿಗೆ ನೀರು ಬಿಡುತ್ತದೆ.
ಕಳೆದ ಎರಡು ದಶಕಗಳಲ್ಲಿ ಈ ರೀತಿ ಮನುಷ್ಯ ನಿರ್ಮಿತ ಪ್ರವಾಹ ಪರಿಸ್ಥಿತಿಯನ್ನು ಈ ಭಾಗದ ಜನರು ಹಲವಾರು ಬಾರಿ ಅನುಭವಿಸಿದ್ದಾರೆ. 2008 ರಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಈ ಗ್ರಾಮಗಳನ್ನು ಸ್ಥಳಾಂತರಿಸುವ ಯೋಜನೆ ಇತ್ತಾದರೂ ಅನುಷ್ಠಾನ ಪೂರ್ಣಪ್ರಮಾಣದಲ್ಲಿ ಆಗಿಲ್ಲ.