ದಾಂಡೇಲಿ: ಕೇಂದ್ರ ಸರಕಾರದ ಯೋಜನೆಗಳ ಯಶಸ್ಸಿಗೆ ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ಜನರ ಸಹಕಾರ ಇದ್ದಾಗ ಮಾತ್ರ ಸ್ವಚ್ಛತಾ ಅಭಿಯಾನದಂತ ಕಾರ್ಯಕ್ರಮಗಳ ಯಶಸ್ಸು ಸಾಧ್ಯ. ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು. ಅವರು ಶುಕ್ರವಾರ ಕಾರವಾರದ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು ರಾಜ್ಯದಲ್ಲಿ ಡಬ್ಬಲ್ ಇಂಜೀನ್ ಸರ್ಕಾರ ಇಲ್ಲದಿರುವುದು ಕೇಂದ್ರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡತಡೆಯಾಗಿದೆ ಎಂದು ಅಳಲು ತೋಡಿಕೊಂಡರು.
ಕೇಂದ್ರ ಸರ್ಕಾರದ ಯೋಜನೆಗಳು ಜಿಲ್ಲೆಯಲ್ಲಿ ಸಮರ್ಪಕವಾಗಿ ಕೆಲಸ ಆಗುತ್ತಿಲ್ಲ. ಬಿ.ಎಸ್.ಎನ್.ಎಲ್. ಟವರ್ಗೆ ಹೆಸ್ಕಾಂ ಸಹಕಾರ ಇಲ್ಲ. ಜಲ ಜೀವನ, ಮನೆ ಮನೆಗೆ ಗಂಗೆ ಹಳ್ಳ ಹಿಡಿದಿದೆ. ಸೂರ್ಯಘರ್ ಪ್ರಗತಿ ಇಲ್ಲ. ಸ್ವಚ್ಛ ಭಾರತ ಸರಿಯಾಗಿ ಆಗುತ್ತಿಲ್ಲ. ಹೋಟೆಲ್ ತ್ಯಾಜ್ಯ, ಕೋಳಿ ವೇಸ್ಟ ನಗರದ ಹೊರಭಾಗದಲ್ಲಿ ಯಾಕೆ ಎಸೆಯುತ್ತಾರೆ ಎಂದು ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಪ್ರಶ್ನಿಸಿ ಚರ್ಚೆ ನಡೆಸಿದರು.
ಊರ ಹೊರಗೆ ನರಕ ಯಾಕೆ. ಪಕ್ಕದ ಗೋವಾ ನೋಡಿ, ಹೇಗೆ ಸ್ವಚ್ಛತೆ ಕಾಪಾಡಿದ್ದಾರೆ. ನಮ್ಮ ರಾಜ್ಯದ ಜನರ ಮೆಂಟಾಲಿಟಿ ಹೀಗೆ ಯಾಕೆ ಎಂದು ಪ್ರಶ್ನಿಸಿದ ಅವರು ಅಧಿಕಾರಿಗಳಿಗೆ ಕ್ರಮ ಜರುಗಿಸಲು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದಶಿ೯ ಸುಷ್ಮಾ ಗೋಡಬೋಲೆ, ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಸಿಇಓ ಡಾ.ದಿಲೀಪ ಶಶಿ, ಎಸ್.ಪಿ. ದೀಪನ್ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.