ಶಿರಸಿ: ಅಜಾಗರೂಕತೆಯಿಂದ ಆಟವಾಡುವ ಸಂದರ್ಭ ದುರಂತಕ್ಕೆ ಕಾರಣವಾಗಿರುವ ದಾರುಣ ಘಟನೆ ಶಿರಸಿಯ ಸೋಮನಳ್ಳಿಯಲ್ಲಿ ನಡೆದಿದೆ. ಗಣಪತಿ ಹೆಗಡೆ ಅವರ ಮನೆಯಲ್ಲಿ ಏರ್ಗನ್ನಲ್ಲಿ ಆಟವಾಡುತ್ತಿದ್ದ ವೇಳೆ ಗುಂಡು ತಗುಲಿ 7 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಈ ಘಟನೆಯು ಸಂಪೂರ್ಣ ದೃಶ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಚಿತ್ರಗಳಲ್ಲಿ ಮಕ್ಕಳು ಆಟವಾಡುತ್ತಿರುವುದು, ಆ ವೇಳೆ ಏರ್ಗನ್ ಕೈಗೆ ಸಿಕ್ಕಿದ್ದು, ಅಕಸ್ಮಾತ್ತಾಗಿ ಗುಂಡು ಚಲಿಸಿದ್ದು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಗುಂಡು ಬಾಲಕನಿಗೆ ತಗುಲಿ, ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ, ಬಾಲಕನನ್ನು ಉಳಿಸಲು ಸಾಧ್ಯವಾಗಲಿಲ್ಲ.
ಗ್ರಾಮದಲ್ಲಿ ನಡೆದಿರುವ ಈ ದಾರುಣ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಬಾಲಕನ ಅಕಾಲಿಕ ಮರಣದಿಂದ ಕುಟುಂಬದ ಮೇಲೆ ದುಃಖದ ಮಳೆ ಸುರಿದಿದೆ. ಒಂದು ಕ್ಷಣದ ಅಜಾಗರೂಕತೆ ಒಂದು ಜೀವ ಕಳೆದುಕೊಂಡಿರುವುದು ಪೋಷಕರಿಗೆ ಎಚ್ಚರಿಕೆಯ ಗಂಟೆ ಹೊಡೆದಂತಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಕೈಗೆ ಏರ್ಗನ್ ಅಥವಾ ಇತರ ಮಾರಕಾಸ್ತ್ರಗಳು ಸಿಗದಂತೆ ನೋಡಿಕೊಳ್ಳುವುದು ಪೋಷಕರ ಹೊಣೆಗಾರಿಕೆ ಎಂಬ ಅಭಿಪ್ರಾಯ ಸ್ಥಳೀಯರಿಂದ ಕೇಳಿಬರುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.