ದಾಂಡೇಲಿ: ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷದಿಂದ ತಾಲ್ಲೂಕಾ ಪಂಚಾಯತ್, ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ನಡೆದಿಲ್ಲ. ಅಧಿಕಾರ ವಿಕೇಂದ್ರಿಕರಣ ಆಗಬೇಕು ಎಂಬ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳು ಜನ್ಮ ತಾಳಿದ್ದವು. ಆದರೆ ಇಂದು ಅಧಿಕಾರದ ವಿಕೇಂದ್ರಿಕರಣದ ಬದಲು ಭ್ರಷ್ಟಾಚಾರದ ವಿಕೇಂದ್ರಿಕರಣ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತ್ ಮಟ್ಟದಲ್ಲೂ ಆಗಿದೆ ಎನ್ನುವದು ಇಲ್ಲಿಯ ಗ್ರಾಮೀಣ ಜನರ ಅನಿಸಿಕೆ.
ಮೂರು ಹಂತಗಳಲ್ಲಿ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆ ಬಲಪಡಿಸಲು ಆದ್ಯತೆ ನೀಡಿ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಸ್ತಿತ್ವಕ್ಕೆ ತಂದರೂ ಇಂದು ಅವರದೇ ಕಾಂಗ್ರೆಸ್ ಪಕ್ಷದ ಸರ್ಕಾರದಿಂದ ವಿಕೇಂದ್ರಿಕರಣ ವ್ಯವಸ್ಥೆ ಸರಿಯಾಗಿ ನಿರ್ವಹಿಸಲಾಗದ ಪರಿಸ್ಥಿತಿ. ಕಳೆದ ನಾಲ್ಕುವರೆ ವರ್ಷಗಳಿಂದ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಿಗೆ ಜನಪ್ರತಿನಿಧಿಗಳಿಲ್ಲ.
ಆಡಳಿತಶಾಹಿಯ ನಿಯಂತ್ರಣದಲ್ಲಿದೆ. ಇದು ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಮಾರಕವಾಗಿದೆ. ಸರ್ಕಾರ ವಿಕೇಂದ್ರಿಕರಣದ ಮೂರು ಹಂತದ ವ್ಯವಸ್ಥೆ ಜಾರಿಗೊಳಿಸಿ ಅಧಿಕಾರ ಅನುಧಾನದ ಬಲ ನೀಡಬೇಕಾದ ಸರಕಾರದಿಂದಲೇ ಗ್ರಾಮೀಣ ಸಮೂದಾಯದ ಕುಂದುಕೊರತೆಗೆ ಸ್ಪಂದಿಸಿ, ರಚನಾತ್ಮಕ ಚರ್ಚೆ, ಜನಪರ ನಿರ್ಣಯಗಳ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಕಟ್ಟಿ ಬೆಳೆಸಬೇಕು.
ಆದರೆ ಈ ವ್ಯವಸ್ಥೆ ಅರಾಜಕತೆಯಿಂದ ಕೂಡಿದ್ದು, ತಾ.ಪಂ., ಜಿ.ಪಂ. ಜನಪ್ರತಿನಿಧಿಗಳಿಲ್ಲದೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಭೃಷ್ಠಾಚಾರ ಮಿತಿ ಮೀರಿದ್ದು, ಪಿ.ಡಿ.ಓ., ಗ್ರಾಮ ಪಂಚಾಯತಿ ಸದಸ್ಯರ ಪಕ್ಷಪಾತ ಕಾರು ಬಾರಿ ನಿಂದ ಗ್ರಾಮಸ್ಥರ ಗೋಳು ಕೇಳುವವರಿಲ್ಲ. ಆದಷ್ಟು ಬೇಗ ವಿಕೇಂದ್ರಿಕರಣದ ಮೂರು ಹಂತದ ತಾಲೂಕಾ ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ನಡೆದು ಜನಪ್ರತಿನಿಧಿ ಆಯ್ಕೆ ನಡೆಯಬೇಕೆಂಬ ಆಶಯ ಗ್ರಾಮೀಣ ಜನರದ್ದಾಗಿದೆ.