ದಾಂಡೇಲಿ (ಉತ್ತರ ಕನ್ನಡ): ಕಾಳಿ ನದಿಯ ತೀರದಲ್ಲಿ ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ರಾಫ್ಟಿಂಗ್ ಮತ್ತು ಜಲಕ್ರೀಡೆ ಚಟುವಟಿಕೆಗಳು ಇದೀಗ ಗಂಭೀರ ವಿವಾದಕ್ಕೆ ಕಾರಣವಾಗಿವೆ. ಸರ್ಕಾರದ ಸ್ವಾಮ್ಯದ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ಸ್ ಹಾಗೂ ಖಾಸಗಿ ಆಪರೇಟರ್ಗಳ ನಡುವೆ ಉಂಟಾಗಿರುವ ಸಂಘರ್ಷವು ದಾಂಡೇಲಿ–ಜೋಯಡಾ ಭಾಗದ ಪ್ರವಾಸೋದ್ಯಮದ ಭವಿಷ್ಯಕ್ಕೆ ಸವಾಲಾಗಿ ಪರಿಣಮಿಸಿದೆ.
20 ವರ್ಷಗಳ ಪರಂಪರೆ – ಮಾರ್ಗಸೂಚಿಗಳ ಅನುಷ್ಠಾನ: ಗಣೇಶ ಗುಡಿಯಿಂದ ಮಾವಳಂಗಿವರೆಗೆ ಸುಮಾರು 9 ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಮಾರ್ಗಸೂಚಿಗಳಡಿ ಕಳೆದ 20 ವರ್ಷಗಳಿಂದ ರಾಫ್ಟಿಂಗ್ ನಡೆಯುತ್ತಿದೆ. ಖಾಸಗಿ ಸಂಸ್ಥೆಗಳಿಗೂ ಸರಕಾರದ ಆದಾಯಕ್ಕೆ ಅನುಕೂಲವಾಗುವಂತೆ ನಿರ್ದಿಷ್ಟ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ಶಾಸಕ ಸತೀಶ್ ಸೈಲ್ಗೆ ಲಿವರ್ ಕಸಿಗಾಗಿ ವೈದ್ಯಕೀಯ ಜಾಮೀನು ಮಂಜೂರು
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಪ್ರವಾಸೋದ್ಯಮ ಸಮಿತಿಯಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದರೂ, ಕೆಲ ರೆಸಾರ್ಟ್ ಮಾಲೀಕರು ಅವುಗಳನ್ನು ಉಲ್ಲಂಘಿಸಿ ಸಂಜೆ 6 ಗಂಟೆಯ ನಂತರವೂ ಅಕ್ರಮವಾಗಿ ರಾಫ್ಟಿಂಗ್ ನಡೆಸುತ್ತಿರುವ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ: ಸಚಿವೆ ಹೆಬ್ಬಾಳಕರ ಬೌಲ್ಗೆ ಸಚಿವ ಸತೀಶ್ ಜಾರಕಿಹೊಳಿ ಕ್ಲೀನ್ ಬೌಲ್ಡ್
ಟೆಂಡರ್ ಮತ್ತು ವಿರೋಧದ ರಾಜಕೀಯ: ಈ ಬಾರಿ ಜಂಗಲ್ ಲಾಡ್ಜ್ ಸಂಸ್ಥೆ ರಾಫ್ಟಿಂಗ್ ನಡೆಸಲು ಟೆಂಡರ್ ಆಹ್ವಾನಿಸಿದ್ದು, ಸ್ಥಳೀಯ ಸಂಸ್ಥೆಯೊಂದು ಟೆಂಡರ್ ಪಡೆದಿದೆ. ಟೆಂಡರ್ ಪಡೆದವರು, ಜಂಗಲ್ ಲಾಡ್ಜ್ ಅಧಿಕಾರಿಗಳು ಮತ್ತು ಕೆಲ ಅರಣ್ಯ ಅಧಿಕಾರಿಗಳು ಸೇರಿ ಖಾಸಗಿ ಸಂಸ್ಥೆಗಳ ಅನುಮತಿ ರದ್ದುಪಡಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅದರಲ್ಲಿ ಹಾರ್ನ್ಬಿಲ್ ಪಕ್ಷಿಗಳ ಆವಾಸಸ್ಥಾನ ಮತ್ತು ಸುರಕ್ಷತೆಯ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸಲಾಗಿದೆ. ಆದರೆ ಕಳೆದ 20 ವರ್ಷಗಳಿಂದ ಜಂಗಲ್ ಲಾಡ್ಜ್ ನಡೆಸುತ್ತಿದ್ದ ರಾಫ್ಟಿಂಗ್ನಿಂದ ಹಾರ್ನ್ಬಿಲ್ಗಳಿಗೆ ಯಾವುದೇ ತೊಂದರೆ ಆಗಿಲ್ಲವಲ್ಲವೇ ಎಂದು ಖಾಸಗಿ ಆಪರೇಟರ್ಗಳು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: DK ಶಿವಕುಮಾರ್ CM ಆಗಲೆಂದು ಶಿವಗಂಗಾ ವ್ರತ: ಶಾಸಕ ಬಸವರಾಜ್ ಭರವಸೆ
ಏಕಾಧಿಕಾರದ ಆರೋಪ: ಖಾಸಗಿ ಜಟ್ಟಿ ಮಾಲೀಕರು ಮತ್ತು ಆಪರೇಟರ್ಗಳ ಪ್ರಕಾರ, ಕೆಲವರು ಜಂಗಲ್ ಲಾಡ್ಜ್ ಮೂಲಕ ಮಾತ್ರ ರಾಫ್ಟಿಂಗ್ ನಡೆಸಬೇಕು ಎಂಬ ಏಕಾಧಿಕಾರದ ಮನೋಭಾವ ಹೊಂದಿದ್ದು, ಇತರರನ್ನು ಹೊರಗುಳಿಸಲು ಪಿತೂರಿ ನಡೆಸುತ್ತಿದ್ದಾರೆ. ಈ ಆಪರೇಟರ್ಗೆ ಈಗಾಗಲೇ ಕಾಳಿ ನದಿಯ ತೀರದಲ್ಲಿ ಹಲವು ರೆಸಾರ್ಟ್ಗಳು ಮತ್ತು ಜಟ್ಟಿಗಳು ಇದ್ದು, ಎಲ್ಲ ಜಲಕ್ರೀಡೆಗಳನ್ನು ತನ್ನ ವಶಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಬದುಕಿನ ಪ್ರಶ್ನೆಯಾದ ಪ್ರವಾಸೋದ್ಯಮ: ದಾಂಡೇಲಿ ಹಾಗೂ ಜೋಯಡಾ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಪ್ರವಾಸೋದ್ಯಮ ಮತ್ತು ಜಲಕ್ರೀಡೆಗಳ ಮೇಲೆ ಅವಲಂಬಿತವಾಗಿವೆ. ಈ ವಿವಾದ ಮುಂದುವರಿದರೆ, ಸ್ಥಳೀಯರ ಬದುಕಿಗೆ ಭಾರಿ ಹೊಡೆತ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತವಾಗಿದೆ.
ಇದನ್ನೂ ಓದಿ: ಹಾಡಹಗಲೇ AAP ನಾಯಕ ಲಕ್ಕಿ ಒಬೆರಾಯ್ ಗುಂಡಿಕ್ಕಿ ಹತ್ಯೆ
ಸ್ಥಳೀಯರು ಹಾಗೂ ಖಾಸಗಿ ಆಪರೇಟರ್ಗಳು, “ಶಿಸ್ತುಬದ್ದ ಮತ್ತು ಪಾರದರ್ಶಕ ಪ್ರವಾಸೋದ್ಯಮ ಬೆಳೆಯಬೇಕು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ವಿವಾದಗಳಿಲ್ಲದೇ ಬದುಕು ಸಾಗಿಸಲು ಜಿಲ್ಲಾಡಳಿತ ಸ್ಪಷ್ಟ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತದ ಪಾತ್ರದ ನಿರೀಕ್ಷೆ: ಜಂಗಲ್ ಲಾಡ್ಜ್ ಸ್ನೇಹಿಗಳು ಹಾಗೂ ಖಾಸಗಿ ಆಪರೇಟರ್ಗಳ ನಡುವೆ ಹುಟ್ಟಿಸಿರುವ ತಪ್ಪು ಚಿತ್ರಣಗಳನ್ನು ಜಿಲ್ಲಾಡಳಿತ ಪರಿಶೀಲಿಸಿ, ಸತ್ಯಾಂಶದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು ಎಂಬ ಆಗ್ರಹ ಹೆಚ್ಚಾಗಿದೆ.
ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯರ ಜೀವನೋಪಾಯ—ಈ ಮೂರು ಅಂಶಗಳ ನಡುವಿನ ಸಮತೋಲನ ಸಾಧಿಸುವ ಹೊಣೆಗಾರಿಕೆ ಇದೀಗ ಜಿಲ್ಲಾಡಳಿತದ ಮೇಲೆ ಹೆಚ್ಚಾಗಿದೆ.






















