ಮದುವೆಗೆ ನಿರಾಕರಿಸಿದ ವಿಚ್ಛೇದಿತ ಮಹಿಳೆಯ ಭೀಕರ ಕೊಲೆ

0
3

ಕಾರವಾರ: ಮದುವೆಯಾಗಲು ನಿರಾಕರಿಸಿದ ಮಹಿಳೆಯನ್ನು ಅನ್ಯಕೋಮಿನ ವ್ಯಕ್ತಿಯೊಬ್ಬ ಕುತ್ತಿಗೆಗೆ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಲ್ಲಾಪುರದ ಕಾಳಮ್ಮನಗರದಲ್ಲಿ ಶನಿವಾರ ನಡೆದಿದೆ.

ರಂಜಿತಾ ಮಲ್ಲಪ್ಪ ಬನ್ಸೋಡೆ(30) ಕೊಲೆಯಾದ ದುರ್ದೈವಿ. ಪತಿಗೆ ವಿಚ್ಛೇದನ ನೀಡಿದ್ದ ರಂಜಿತಾ ಪಟ್ಟಣದ ರಾಮಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಳು. ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಬರುತ್ತಿದ್ದಾಗ ಕಾಳಮ್ಮನಗರದಲ್ಲಿ ಅವಳ ಕ್ಲಾಸಮೇಟ್ ಆಗಿದ್ದ ಪರಿಚಿತ ವ್ಯಕ್ತಿ ರಫೀಕ್ ಇಮಾಮಸಾಬ ಏಳ್ಳೂರು (30) ಹರಿತವಾದ ಆಯುಧದಿಂದ ಅವಳ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.

ಮೃತಪಟ್ಟ ಮಹಿಳೆಗೆ 10 ವರ್ಷದ ಮಗನಿದ್ದಾನೆ. ಆರೋಪಿ ರಫೀಕ್ ಮಹಿಳೆಗೆ ಮದುವೆಯಾಗುವಂತೆ ಪೀಡಿಸುತ್ತಿದ್ದನು. ಅವಳು ನಿರಾಕರಿಸಿ ಅವನೊಡನೆ ಮಾತನಾಡುವುದನ್ನು ಬಿಟ್ಟಿದ್ದಳು. ಅದೇ ಸಿಟ್ಟಿನಲ್ಲಿ ಶನಿವಾರ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ವಾದ-ವಿವಾದ ನಡೆದು ಆರೋಪಿ ರಫೀಕ್ ಮಹಿಳೆಗೆ ಇರಿದು ಕೊಲೆ ಮಾಡಿ ಅರಣ್ಯದೊಳಗೆ ಓಡಿಹೋಗಿದ್ದಾನೆ.

ಚಾಕು ಇರಿತಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಹುಬ್ಬಳ್ಳಿಗೆ ಕರೆದೊಯ್ಯು ತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Previous articleರೆಡ್ಡಿಯ ಸಣ್ಣತನವೇ ದೊಡ್ಡ ಗಲಾಟೆಗೆ ಕಾರಣ