ಉಡುಪಿ: ಸೌಪರ್ಣಿಕ ನದಿ ಬಳಿ ಬೆಂಗಳೂರು ಮೂಲದ ಮಹಿಳೆ ನಾಪತ್ತೆ

0
119

ಉಡುಪಿ: ಬೆಂಗಳೂರು ಮೂಲದ ವಿವಾಹಿತೆಯೋರ್ವರು ಕಳೆದ 2 ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದು, ಏಕಾಏಕಿ ನಾಪತ್ತೆಯಾಗಿದ್ದಾರೆ. ಆಕೆಯ ನಿಗೂಢ ಕಣ್ಮರೆ ವಿವಿಧ ಊಹಾ ಪೋಹಗಳಿಗೆ ಕಾರಣವಾಗಿದೆ. ಬೆಂಗಳೂರು ತ್ಯಾಗರಾಜ ನಗರ ನಿವಾಸಿ ಸಿ. ಆರ್. ಗೋವಿಂದರಾಜು ಪುತ್ರಿ ವಸುಧಾ ಚಕ್ರವರ್ತಿ (46) ಆ. 28ರಂದು ಕೊಲ್ಲೂರಿಗೆ ಆಗಮಿಸಿದ್ದು, ಖಾಸಗಿ ವಸತಿಗೃಹದ ಬಳಿ ಕಾರು ನಿಲ್ಲಿಸಿ ದೇವಾಲಯಕ್ಕೆ ತೆರಳಿ ಆಂಜನೇಯ ಗರ್ಭಗುಡಿಯಲ್ಲಿ ಕೆಲ ಕಾಲ ಕಳೆದು ವಿವಿಧೆಡೆಗೆ ಸಾಗಿ ಸೌಪರ್ಣಿಕಾ ನದಿಯತ್ತ ತೆರಳಿ ನಾಪತ್ತೆಯಾಗಿದ್ದರು.

ಪೊಲೀಸರು ಹಾಗೂ ಗ್ರಾಮಸ್ಥರು ಸೌಪರ್ಣಿಕಾ ನದಿ ಸಹಿತ ವಿವಿಧೆಡೆ ಹುಡುಕಾಟ ನಡೆಸಿದರೂ ಆಕೆಯ ಪತ್ತೆಯಾಗಿಲ್ಲ. ಕಾರಿನಲ್ಲಿ ಮೊಬೈಲ್‌ ಇನ್ನಿತರ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಆಕೆಯ ವಿಳಾಸ ಪತ್ತೆಯಾಯಿತು. ಈ ಬಗ್ಗೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.

ಸೌಪರ್ಣಿಕಾ ನದಿಯಲ್ಲಿ ಆಕೆ ಈಜುತ್ತಿರುವುದು ನದಿ ಬಳಿ ಅಳವಡಿಸಲಾದ ಸಿ.ಸಿ. ಕೆಮರಾದಲ್ಲಿ ಸೆರೆಯಾಗಿದೆ. ಉತ್ತಮ ಈಜುಗಾರ್ತಿಯಾಗಿರುವ ವಸುಧಾ, ಬಹುದೂರ ಈಜಿ ದಡ ಸೇರಿದರೇ ಅಥವಾ ಉಕ್ಕಿ ಹರಿಯುತ್ತಿರುವ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋದರೇ ಎನ್ನವುದು ಪ್ರಶ್ನಾರ್ಥಕವಾಗಿದೆ.

ಕೊಲ್ಲೂರಿನಲ್ಲಿ ನಾಪತ್ತೆಯಾಗಿದ್ದ ಮಹಿಳೆ ನೀರುಪಾಲು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಬೆಂಗಳೂರು ತ್ಯಾಗರಾಜ ನಗರದ ವಸುಧಾ ಚಕ್ರವರ್ತಿ (45) ಸೌಪರ್ಣಿಕಾ ನದಿ ನೀರುಪಾಲಾಗಿರುವುದಾಗಿ ಕೊಲ್ಲೂರು ಪೊಲೀಸರು ತಿಳಿಸಿದ್ದಾರೆ. ಆಕೆಯ ಶವಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ.
ಮೃತ ವಸುಧಾ ಮಾನಸಿಕ ಅಸ್ವಸ್ಥೆಯಾಗಿದ್ದಳು ಎಂದು ಆಕೆಯ ತಾಯಿ ವಿಮಲಾ ಪೊಲೀಸರಿಗೆ ತಿಳಿಸಿದ್ದಾರೆ.


ಆ. 27ರಂದು ವಸುಧಾ ತನ್ನ ಕೆಎ04ಎಂವೈ7092 ಕಾರಿನಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ಪ ದೇವಸ್ಥಾನಕ್ಕೆ ಬಂದಿದ್ದು, ವಸತಿ ಗೃಹವೊಂದರಲ್ಲಿ ಕಾರು ನಿಲ್ಲಿಸಿ ಹೋಗಿರುವ ವಿಚಾರ ತಿಳಿದಿದ್ದು, ಮಗಳ ಮೊಬೈಲ್‌‌ ಸಂಖ್ಯೆಗೆ ಕರೆ ಮಾಡಿದರೂ ಸಿಗದ ಹಿನ್ನೆಲೆಯಲ್ಲಿ ಆ. 29ರಂದು ವಿಮಲಾ ಕೊಲ್ಲೂರಿಗೆ ಬಂದು ಮಗಳ ಬಗ್ಗೆ ದೇವಸ್ಥಾನದ ಸಿಬ್ಬಂದಿಯಲ್ಲಿ ವಿಚಾರಿಸಿದ್ದು, ವಸುಧಾ ಚಕ್ರವರ್ತಿ ದೇವಸ್ಥಾನದ ಪ್ರಾಂಗಣದಲ್ಲಿ ಮಾನಸಿಕ ಸಮಸ್ಯೆ ಇರುವ ರೀತಿಯಲ್ಲಿ ಅಸಭ್ಯವಾಗಿ ವರ್ತಿಸಿ, ನಂತರ ಅಲ್ಲಿಂದ ರಸ್ತೆಯಲ್ಲಿ ಓಡಿಕೊಂಡು ಹೋಗಿರುವುದಾಗಿ ತಿಳಿಸಿದರು.

ಆಕೆ ನದಿಯಲ್ಲಿ ಇಳಿದಿರುವ ವಿಚಾರ ತಿಳಿದುಬಂದಿದ್ದು, ಆಕೆ ನೀರು ಪಾಲಾಗಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲ್ಲೂರು ಠಾಣೆಯಲ್ಲಿ ಮಹಿಳೆ ಕಾಣೆ ಬಗ್ಗೆ ದೂರು ದಾಖಲಾಗಿತ್ತು. ಇದೀಗ ಸ್ಥಳೀಯರು, ಬೈಂದೂರು ಅಗ್ನಿಶಾಮಕ ದಳ ಹಾಗೂ ಈಶ್ವರ್ ಮಲ್ಪೆ ತಂಡ ಹುಡುಕಾಟ ನಡೆಸುತ್ತಿದ್ದಾರೆ.

Previous articleಆಸ್ತಿ ಮಾಲೀಕರು ಗಮನಿಸಿ: ಆ.31 ರಿಂದ ಆಸ್ತಿ ನೋಂದಣಿ ಶುಲ್ಕ ಹೆಚ್ಚಳ
Next articleಮೈಸೂರು ದಸರಾ 2025 ವಿವಾದ: ಸರ್ಕಾರಕ್ಕೆ ಆರ್. ಅಶೋಕ 5 ಪ್ರಶ್ನೆಗಳು

LEAVE A REPLY

Please enter your comment!
Please enter your name here