ರಾಯಚೂರು: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಬಿಹಾರ ಮೂಲದ ಮನೋಜ ಸದಾ ಎಂಬಾತನನ್ನು ಬಿಹಾರ ರಾಜ್ಯದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ರಾಯಚೂರು ಹೊರವಲಯದ ಯರಮರಸ್ ಕೈಗಾರಿಕಾ ವಲಯದ ಅಕ್ಕಿ ಗಿರಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮನೋಜ್ ಸದಾ. ಅವನ ವಿರುದ್ಧ ಕೊಲೆ, ಸುಲಿಗೆ, ಜೀವ ಬೆದರಿಕೆ ಸೇರಿದಂತೆ ಒಟ್ಟು 18 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
ತನಿಖೆ ನಡೆಸುತ್ತಿರುವ ಬಿಹಾರದ ಖಗಾರಿಯಾ ಜಿಲ್ಲೆಯ ಅಲೌಲಿ ಪೊಲೀಸ್ ಠಾಣಾ ಪೊಲೀಸರು ಜಿಲ್ಲೆಗೆ ಆಗಮಿಸಿ ರಾಯಚೂರು ಗ್ರಾಮೀಣ ಠಾಣೆಯ ಪೊಲೀಸರ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಬಿಹಾರ ರಾಜ್ಯದಲ್ಲಿ ಅನೇಕ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮನೋಜ ಸದಾ ಶಂಕಿತ ನಕ್ಸಲ್ ಎನ್ನುವ ಸಂಶಯವೂ ವ್ಯಕ್ತವಾಗಿದ್ದು, ಬಿಹಾರದಿಂದ ತಲೆಮರಿಸಿಕೊಂಡು ಬಂದು ರಾಯಚೂರಿನ ಯರಮರಸ್ ಕೈಗಾರಿಕಾ ಪ್ರದೇಶದ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದನು.
ಪ್ರಕರಣಗಳ ಬೆನ್ನತ್ತಿದ ಬಿಹಾರಿ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚಿ ನಗರದ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.