ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಸಂಸದ ಯದುವೀರ್ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಕ್ಯಾತಮಾರನಹಳ್ಳಿ ರಾಜು ಕೊಲೆಯಾಯಿತು. ಇದಾದ ಬಳಿಕ ಹಾಡಹಾಗಲೇ ವೆಂಕಟೇಶ್ ಕೊಲೆಯಾಗಿ ಮೂರು ದಿನಗಳಲ್ಲಿಯೇ ಅಪ್ರಾಪ್ತ ಬಾಲಕಿ ಕೊಲೆಯಾಗಿದೆ. ಇಲ್ಲಿ ಪೊಲೀಸರೆಂದರೆ ಭಯ ಇಲ್ಲದಂತಾಗಿದೆ. ಯಾವುದೇ ಜಿಲ್ಲೆ ಅಥವಾ ರಾಜ್ಯದಿಂದ ಇಲ್ಲಿಗೆ ಬಂದರೆ ಅದರ ಬಗ್ಗೆ ಮಾಹಿತಿ ಸಿಎಂ ಅವರಿಗೆ ಇರಲೇಬೇಕು. ಗೊಂಬೆ ಮಾರಲು ಬಂದು ಶವವಾದ ಈ ಪ್ರಕರಣ ದುರಂತ ಎಂದು ಖೇಧ ವ್ಯಕ್ತಪಡಿಸಿದರು.
ಪ್ರತಿಷ್ಟಿತೆಯಿಂದಲೇ ಆಡಳಿತ ನಡೆಸಿ: ಪ್ರತಿ ಚುನಾವಣೆಯಲ್ಲಿಯೂ ಸಿದ್ದರಾಮಯ್ಯ ಪ್ರತಿಷ್ಠಿತೆ ಚುನಾವಣೆ ಎಂದು ಭಾಷಣ ಮಾಡುತ್ತಾರೆ. ಅದೇ ರೀತಿ ಪ್ರತಿಷ್ಟಿತೆಯಿಂದಲೇ ಆಡಳಿತ ನಡೆಸಬೇಕು. ಆದರೆ ಮೈಸೂರಿನಲ್ಲಿ ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನಕ್ಕೆ ಬದ್ದ ಎನ್ನುವ ಸಿಎಂ ಸಿದ್ದರಾಮಯ್ಯ ಸಂವಿಧಾನದ ಆಶಯದಂತೆ ಆಡಳಿತ ನಡೆಸುತ್ತಿಲ್ಲ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ವಿಫಲವಾಗಿದೆ. ವಿರೋಧ ಪಕ್ಷ ಧ್ವನಿ ಎತ್ತುವ ಮೂಲಕ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಜನರು ತಕ್ಕ ಪಾಠ ಕಲಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನರ ದಸರಾ ಅಲ್ಲ ಕಾಂಗ್ರೆಸ್ ದಸರಾ: ಈ ಸಾರಿ ಆಗಿದ್ದು ಜನರ ದಸರಾ ಅಲ್ಲ ಅದು ಕಾಂಗ್ರೆಸ್ ದಸರಾ ಹಾಗೂ ಪ್ರಭಾವಿಗಳ ದಸರಾ. ಪಾಸ್ ವ್ಯವಸ್ಥೆ ಮಾಡಿದರೆ ಪಾರದರ್ಶಕತೆಯಿಂದ ಮಾಡಬೇಕು. ಗೋಲ್ಡನ್ ಪಾಸ್ ಇದ್ದರೂ ಪ್ರವೇಶ ಇಲ್ಲ ಎಂದರೆ ಹೇಗೆ. ಇದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಪಾಸ್ ವ್ಯವಸ್ಥೆ ಆಗದಿದ್ದರೆ ಟಿಕೆಟ್ ಮಾಡಿ. ಇಲ್ಲವೆ ವ್ಯವಸ್ಥಿತವಾಗಿ ಮಾಡಿ. ಈ ದಸರಾ ಜನರಿಗೆ ಅನುಕೂಲವಾಗಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು, ಅವರ ಕುಟುಂಬ ಹಾಗೂ ಬೆಂಬಲರಿಗೆ ಮಾತ್ರ ಅನುಕೂಲವಾಗಿದೆ ಎಂದು ದೂರಿದರು.
ಲೋಕಲ್ ಚುನಾವಣೆ ನಡೆಸಿ: ಮಹಾನಗರಪಾಲಿಕೆ ಚುನಾವಣೆ ನಡೆಸದ ಹಿನ್ನಲೆಯಲ್ಲಿ ಕೇಂದ್ರದಿಂದ ಬಿಡುಗಡೆಯಾಗಿದ್ದ 70 ಕೋಟಿ ರೂಪಾಯಿ ಅನುದಾನ ಖರ್ಚು ಮಾಡಲಾಗದೆ ವಾಪಾಸ್ ಹೋಗಿದೆ. ಮೊದಲು ಸ್ಥಳೀಯ ಚುನಾವಣೆ ನಡೆಸಬೇಕು. ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕಾರ ಸಿಗಬೇಕು. ಇಲ್ಲದಿದ್ದರೆ ಆಡಳಿತ ಕಷ್ಟವಾಗಲಿದೆ. ಇನ್ನೂ ಮುಂದೆ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ ಎಂದು ಯದುವೀರ್ ಹೇಳಿದರು.