ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಹೇಮಾವತಿ ನೀರಾವರಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕಾಲುವೆಯ ನೀರು ರೈತರ ಜಮೀನಿಗೆ ನುಗ್ಗಿ ಕಬ್ಬು, ಸೇರಿದಂತೆ ಇನ್ನಿತರ ಬೆಳೆ ಹಾನಿಯಾಗಿದೆ.
ತಾಲೂಕಿನ ಲಿಂಗಾಪುರ ಗ್ರಾಮದ ಬಳಿ ಇರುವ ಹೇಮಾವತಿ ಬಲದಂಡೆ ಸೀಳು ಕಾಲುವೆಯಲ್ಲಿ ಹಲವಾರು ವರ್ಷಗಳಿಂದ ನಾಲೆಯಲ್ಲಿ ನೀರು ಹೋಗಲಾಗದಷ್ಟು ನಾಲೆ ಉದ್ದಕ್ಕೂ ಗಿಡಗಂಟಿಗಳು ಬೆಳೆದು ನಾಲೆಯಲ್ಲಿ ಹೋಗಬೇಕಿದ್ದ ನೀರು ನಾಲೆ ಏರಿ ಮೇಲೆ ಹರಿದು ಮಾಕವಳ್ಳಿ ಸಂತೋಷ್ ಎಂಬುವವರಿಗೆ ಸೇರಿದ ಒಂದು ಎಕರೆಯಲ್ಲಿರುವ ಮೂರು ತಿಂಗಳ ಕಬ್ಬಿನ ಫಸಲು ಸೇರಿದಂತೆ ಅಕ್ಕ ಪಕ್ಕದ ರೈತರು ಬೆಳೆದ ರಾಗಿ, ಭತ್ತ ಬೆಳೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ರೈತ ಸಂತೋಷ್ ಮಾತನಾಡಿ, “ಈ ಸೀಳುಗಾಲವೆ ಈ ಭಾಗದ ರೈತ ಜೀವನಾಡಿಯಾಗಿದೆ. ಹೇಮಾವತಿ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಹಲವು ವರ್ಷಗಳಿಂದ ಕಾಲುವೆಯ ಒಳಭಾಗದಲ್ಲಿರುವ ಗಿಡಗಂಟಿಳನ್ನು ಸ್ವಚ್ಛಗೊಳಿಸದ ಹಿನ್ನೆಲೆ ನಾಲೆಯಲ್ಲಿ ನೀರು ಹೋಗದೆ ನಾಲೆ ಏರಿ ಮೇಲೆ ಹರಿಯುತ್ತಿದೆ” ಎಂದರು.
“ನಮ್ಮ ಕಬ್ಬಿನ ಬೆಳೆಯಿದ್ದ ಜಮೀನು ಸೇರಿದಂತೆ ಅಕ್ಕಪಕ್ಕದ ರೈತರ ಜಮೀನಿನ ಮೇಲೆ ಸತತ ಒಂದು ವಾರದಿಂದ ಹರಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸಂಬಂಧಪಟ್ಟ ಹೇಮಾವತಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಮಾಡಿದರು ಕೂಡ ಉಡಾಫೆ ಉತ್ತರ ನೀಡುತ್ತಿದ್ದಾರೆ. ನಾಲೆಯಲ್ಲಿ ಬೆಳೆದ ಜಂಗಲ್ ಕೂಡಲೇ ತೆರುವುಗೊಳಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಬೇಕು” ಎಂದು ಆಗ್ರಹಿಸಿದರು.