ಗಂಗಾವತಿ: ವಿದೇಶಿ ಮಹಿಳೆ ಮತ್ತು ಹೋಟೆಲ್ ಮಾಲೀಕೆಯ ಮೇಲೆ ಅತ್ಯಾಚಾರ ಮತ್ತು ವಿದೇಶಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದ್ದು, ಮರಣದಂಡನೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಂಗಾಪುರ ಗ್ರಾಪಂ ವ್ಯಾಪ್ತಿಯ ಸಾಯಿನಗರದ ಗೌಂಡಿ ಕಾರ್ಮಿಕ ಮಲ್ಲೇಶ (ಹಂದಿ ಮಲ್ಲ), ಸಾಯಿ (ಚೈತನ್ಯ ಸಾಯಿ), ಶರಣಪ್ಪ (ಶರಣ ಬಸವರಾಜ್) ಮೇಲಿನ ಆರೋಪ ಸಾಬೀತಾಗಿದೆ.
ಪ್ರಕರಣ ಹಿನ್ನೆಲೆ: ತಾಲೂಕಿನ ಸಾಣಾಪುರ ಬಳಿಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿನ ಹರ್ಟ್ ಲೈನ್ ಎಂಬ ಹೋಟೆಲ್ ಬಳಿ 2025ರ ಮಾರ್ಚ್ನಲ್ಲಿ ರಾತ್ರಿಯ ಪ್ರಕೃತಿ ಸೌಂದರ್ಯ ಸವಿಯಲು ತೆರಳಿದ್ದ ಇಸ್ರೇಲ್ ಮಹಿಳೆ ಮತ್ತು ಹೋಟೆಲ್ ಮಾಲೀಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಕೃತ್ಯ ಖಂಡಿಸಿದ ಅಮೆರಿಕಾದ ಡೇನಿಯಲ್, ಮಹಾರಾಷ್ಟ್ರದ ನಾಸಿಕ್ನ ಪಂಕಜ್ ಪಟೇಲ್ ಮತ್ತು ಓರಿಸ್ಸಾದ ಬಿಬಾಸ್ ಎಂಬ ಯುವಕರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಓರಿಸ್ಸಾದ ಬಿಬಾಸ್(43) ಕೊಲೆಯಾಗಿದ್ದನು. ಈ ಹಿನ್ನೆಲೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಹೈಕೋರ್ಟ್ ತೀರ್ಪು
ಗಂಗಾವತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, 11 ತಿಂಗಳ ಬಳಿಕ ತೀರ್ಪು ನೀಡಲಾಗಿದೆ. ಸರಕಾರದ ಸಹಾಯಕ ಅಭಿಯೋಜಕಿ ನಾಗಲಕ್ಷ್ಮಿ ಸರಕಾರದ ಪರ ವಾದ ಮಂಡಿಸಿದ್ದರು.























