ಹುಬ್ಬಳ್ಳಿ: ಬಿಜೆಪಿಗರು ಮುಂದೊಂದು ದಿನ ನರವಣಿ ಅವರನ್ನೂ ದೇಶದ್ರೋಹಿ ಎನ್ನುತ್ತಾರೆ. ಸೇನಾ ಮುಖ್ಯಸ್ಥರೇ ಬರೆದಿರುವ ಪುಸ್ತಕಕ್ಕೆ ಯಾಕೆ ಬಿಜೆಪಿಯವರು ಪರವಾನಗಿ ನೀಡುತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಅಮೆರಿಕ ವ್ಯವಹಾರ ಟ್ರಂಪ್ ಮೂಲಕ ಗೊತ್ತಾಗುತ್ತಿದೆ. ಅವರು ಹೇಳಿದಂತೆ ನಾವು ಕೇಳುವಂತಹ ಸ್ಥಿತಿ ಬಂದಿದೆ. ಅಮೆರಿಕದಿಂದ ಭಾರತಕ್ಕೆ ಯಾವುದೇ ವಸ್ತು ಬಂದರೂ ಜೀರೋ ಟ್ಯಾಕ್ಸ್. ರೈತರ ಉತ್ಪನ್ನಗಳಿಗೆ ಜಿರೋ ಟ್ಯಾಕ್ಸ್ ಹಾಕುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆ ಆಗಲಿದೆ. ಅಮೆರಿಕ ಭಾರತ ಒಪ್ಪಂದದಿಂದ ಯಾರಿಗೆ ಲಾಭ ಆಗುತ್ತದೆ? ಟ್ರಂಪ್ ಬಾಬಾ ಹೇಳಿದ್ದನ್ನು ಮೋದಿ ಬಾಬಾ ಕೇಳಬೇಕು ಎಂದರು.
ಇವರು ಎಷ್ಟು ಬಾಂಗ್ಲಾದೇಶಿಯರನ್ನು ದೇಶದಿಂದ ಗಡಿಪಾರು ಮಾಡಿದ್ದಾರೆ? ದೇಶದ ಹದ್ದು ಕಾಪಾಡೋದು ರಾಜ್ಯಗಳಲ್ಲಾ? ಇದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಬೇಕು. ರಾಮ ಮಂದಿರ ನಿರ್ಮಾಣ ಸಮಯದಲ್ಲಿ ರಾಮನ ಮೂರ್ತಿ ಭಾವಚಿತ್ರಕ್ಕಿಂತ ಮೋದಿ ಅವರ ಭಾವಚಿತ್ರವೇ ದೊಡ್ಡದಾಗಿದ್ದವು ಎಂದರು.
ಹದಿನಾರುವರೆ ಲಕ್ಷ ಕಾರ್ಪೋರೇಟ್ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಈವರೆಗೂ ರೈತರ ಸಾಲವನ್ನು ಬಿಜೆಪಿಯವರು ಮನ್ನಾ ಮಾಡಿಲ್ಲ. ಬ್ಯಾಂಕ್ಗಳಿಗೆ ವಂಚಿಸಿ ಓಡಿ ಹೋದವರೆಲ್ಲ ಗುಜರಾತಿನವರು. ಆದರೂ ಗುಜರಾತ್ ಮಾಡಲ್ ಅಂತ ಕರೆಯುತ್ತಾರೆ. ಬಿಜೆಪಿ ಅಧಿಕಾರ ಇರೋ ಒಂದು ರಾಜ್ಯವೂ ಸುರಕ್ಷಿತ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿಲ್ಲ ಎಂದರು.






















