ಹುಬ್ಬಳ್ಳಿ: ಮುಂಬರುವ ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಪ್ರಯಾಣಕ್ಕಾಗಿ ನೈರುತ್ಯ ರೈಲ್ವೆ ಈಗಾಗಲೇ ವಿವಿಧ ಮಾರ್ಗಗಳಲ್ಲಿ 47 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇದರೊಂದಿಗೆ ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ಇನ್ನೂ 14 ಹೆಚ್ಚುವರಿ ವಿಶೇಷ ರೈಲುಗಳನ್ನು ಓಡಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯ ಅನುಮೋದನೆಗಾಗಿ ಕಾಯುತ್ತಿದೆ.
ಈ ಪ್ರಸ್ತಾವಿತ ರೈಲುಗಳು ನೈರುತ್ಯ ರೈಲ್ವೆ ಜಾಲದ ವಿವಿಧ ನಿಲ್ದಾಣಗಳಿಂದ ಧನ್ಬಾದ್, ನಾರಂಗಿ, ಮಾಲ್ಡಾ ಟೌನ್, ಯೋಗನಗರಿ ರಿಷಿಕೇಶ, ಜೈಸಲ್ಮೇರ್, ಕಣ್ಣೂರು ಮತ್ತು ವಾರಣಾಸಿ ಸಿಟಿಯಂತಹ ಪ್ರಮುಖ ನಗರಗಳನ್ನು ಸಂಪರ್ಕಿಸಲಿವೆ.
ಹಬ್ಬದ ಅವಧಿಯಲ್ಲಿ ನಿರೀಕ್ಷಿತ ಪ್ರಯಾಣಿಕರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮತ್ತು ಪ್ರಮುಖ ಸ್ಥಳಗಳ ನಡುವೆ ಸುಗಮ ಹಾಗೂ ಸುಧಾರಿತ ಸಂಪರ್ಕವನ್ನು ಕಲ್ಪಿಸುವುದು ಈ ವಿಶೇಷ ರೈಲುಗಳ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ. ಈ ವಿಶೇಷ ರೈಲುಗಳು ಮಾರ್ಚ್ ತಿಂಗಳಿನಲ್ಲಿ ಸಂಚರಿಸಲಿದ್ದು, ಬಣ್ಣಗಳ ಹಬ್ಬವನ್ನು ಆಚರಿಸಲು ತೆರಳುವ ಪ್ರಯಾಣಿಕರಿಗೆ ಸಕಾಲಿಕ ಮತ್ತು ಅನುಕೂಲಕರ ಪ್ರಯಾಣಕ್ಕೆ ಅನುವು ಮಾಡಿಕೊಡಲಿವೆ.























