ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮಹಿಳೆಯರ ಬಗ್ಗೆ ಗೌರವವೇ ಇಲ್ಲ. ಯಾವಾಗಲೂ ‘ಅವಳಿವಳು’ ಎಂದೇ ಸಂಬೋಧಿಸುತ್ತಾರೆ. ಇದು ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ಅವಮಾನ’ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಏಕವಚನದಲ್ಲಿ ಕರೆದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಅವರ ಈ ‘ಅವಳಿವಳು’ ಭಾಷೆ ಮಹಿಳಾ ಸಮುದಾಯಕ್ಕೆ ತೋರುವ ಅಗೌರವದ ಪರಮಾವಧಿ ಎಂದು ಖಂಡಿಸಿದ್ದಾರೆ.
ಕರ್ನಾಟಕದಿಂದಲೇ ಆಯ್ಕೆಯಾದ ಸಂಸದೆ, ಕೇಂದ್ರ ಹಣಕಾಸು ಸಚಿವೆ ಬಗ್ಗೆ ಸಿಎಂ ಹೀಗೆ ಏಕವಚನದ ಶೈಲಿಯಲ್ಲಿ ಮಾತನಾಡಿರುವುದು ಅವರ ಹುದ್ದೆಗೆ ಗೌರವ ತರುವಂಥದ್ದಲ್ಲ. ಸಿದ್ದರಾಮಯ್ಯ ಅವರಿಂದ ಪ್ರತಿ ಬಾರಿಯೂ ಇಂಥ ಅವಮಾನಕರ ಹೇಳಿಕೆ ಮರುಕಳಿಸುತ್ತಲೇ ಇದೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ, ಪ್ರಿಯಾಂಕಾರನ್ನು ‘ಅವಳಿವಳೆ’ನ್ನೋ ಧೈರ್ಯ ತೋರ್ತಾರಾ ಸಿಎಂ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥ ಸ್ಥಾನದಲ್ಲಿ ನಿಂತಾಗಲೆಲ್ಲಾ ನನ್ನದು ‘ಅಪ್ಪಟ ಗ್ರಾಮೀಣ ಭಾಷೆ’ ಎಂಬ ಸಮಜಾಯಿಷಿ ನೀಡುತ್ತಾರೆ. ಹಾಗಾದರೆ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಅವರನ್ನೂ ಹೀಗೆ ಏಕವಚನದಲ್ಲೇ ಕರೆಯುವ ಧೈರ್ಯ ತೋರುತ್ತಾರೆಯೇ? ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಇದೆಂಥಾ ಮನುವಾದ ಸಿಎಂರದ್ದು: ಮಹಿಳೆಯರ ಬಗ್ಗೆ ಏಕವಚನ ಸಂಬೋಧನೆ ಸಭ್ಯತೆಯಲ್ಲ. ಈ ಅವಮಾನ ಸ್ವೀಕಾರಾರ್ಹವಲ್ಲ. ದೇಶದ ಗೌರವಾನ್ವಿತರಾಗಿರುವ ಹಣಕಾಸು ಸಚಿವೆ ಅವರನ್ನು ಹೀಗೆ ಏಕವಚನದಲ್ಲಿ, ಅಗೌರವದಿಂದ ಸಂಬೋಧನೆ ಮಾಡುವುದು ಯಾವ ಸಂಸ್ಕೃತಿ? ಇವರದ್ದು ಇದೆಂಥಾ ಮನುವಾದ? ಎಂದು ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಷ್ಟ್ರಪತಿ ಬಗ್ಗೆಯೂ ಇದೇ ಧಾಟಿ ತೋರಿದ್ರು ಸಿಎಂ ಕನಿಷ್ಠ ತಮ್ಮ ಸ್ಥಾನದ ಅರಿವಿಲ್ಲದೇ ಗೌರವ, ಸೌಜನ್ಯ ಮರೆತು ಮಾತನಾಡಿದ್ದಾರೆ. ಈ ಹಿಂದೆ ಮಾನ್ಯ ರಾಷ್ಟ್ರಪತಿಗಳ ಬಗ್ಗೆಯೂ ಇದೇ ಧಾಟಿ ತೋರಿದ್ದರು ಎಂದು ಜೋಶಿ ಖಂಡಿಸಿದ್ದಾರೆ.
ಪ್ರಮುಖರ ಬಗ್ಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುವ ಸಿಎಂ ವಾಕ್ಚಾಳಿ ನಿಜಕ್ಕೂ ಅತ್ಯಂತ ಖಂಡನೀಯ. ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸಿಎಂಗೆ ಸ್ವಲ್ಪ ತಿಳಿವಳಿಕೆ ಹೇಳುವ ಅವಶ್ಯಕತೆಯಿದೆ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.



















