ಹುಬ್ಬಳ್ಳಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ ಇದ್ದಂತೆ. ಅವರೇನೇ ಅಂದರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅದನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇನೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ `ಮಹೇಶ ಟೆಂಗಿನಕಾಯಿ ಬಲೂನ್ ಇದ್ದಂತೆ, ಅದು ಒಡೆಯಲು ಬಹಳ ದಿನ ಬೇಕಾಗಲ್ಲ’ ಎಂದು ಹೇಳಿಕೆ ನೀಡಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ತಿರುಗೇಟು ನೀಡಿದರು.
ಹೆಬ್ಬಾಳ್ಕರ್ ಅವರು ನನ್ನ ಮೇಲಿರುವ ಪ್ರೀತಿಯಿಂದ ಹಾಗೆ ಮಾತನಾಡಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಗೃಹಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ ಹಣ ಫಲಾನುಭವಿಗಳಿಗೆ ತಲುಪದ ಬಗ್ಗೆ ಚರ್ಚೆ ಮಾಡಿದ್ದೆ. ಮೊನ್ನೆ ವಿಶೇಷ ಅಧಿವೇಶನದಲ್ಲೂ ಇದನ್ನು ಪ್ರಸ್ತಾಪ ಮಾಡಿದ್ದೇವೆ. ಫಲಾನುಭವಿಗಳ ಖಾತೆಗೆ ಬಾಕಿ ಹಣ ಬರುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಅನ್ನಭಾಗ್ಯ ಯೋಜನೆಯ ಹಣವೂ ಬಾಕಿ ಉಳಿದುಕೊಂಡಿದೆ. 2025ರ ಜನವರಿ ತಿಂಗಳಲ್ಲಿ ವಿತರಣೆಯಾಗಬೇಕಿದ್ದ ಅಕ್ಕಿ ಅಥವಾ 657 ಕೋಟಿ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ ಫಲಾನುಭವಿಗಳಿಗೆ ಆದ ಅನ್ಯಾಯದ ಬಗ್ಗೆ ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲಾವಾರು ಹೋರಾಟ ಮಾಡಲಾಗುವುದ ಎಂದರು.






















