ದಾವಣಗೆರೆ: ಸಿಎಂ ಸಿದ್ದರಾಮಯ್ಯ ಹಿಂದೂ ಧರ್ಮದಿಂದ ಲಿಂಗಾಯತರನ್ನು ಬೇರ್ಪಡಿಸಿ ಧರ್ಮ ಒಡೆಯುತ್ತಿಲ್ಲ, ಒಡೆಯಲು ಅದೇನು ಮಡಕೆಯಲ್ಲ ಎಂದು ಕೂಡಲಸಂಗಮದ ಬಸವಪೀಠದ ಪೀಠಾಧ್ಯೆಕ್ಷೆ ಮಾತೆ ಗಂಗಾದೇವಿ ಸಿದ್ಧರಾಮಯ್ಯರನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ನಮ್ಮ ಹೋರಾಟ ಬಹು ಹಿಂದಿನಿಂದ ಬಂದಿದೆ. ಹಾಗಾಗಿ, ಈಗ ಸಿದ್ಧರಾಮಯ್ಯ ಹೇಳಿದ ಬಳಿಕ ಶುರುವಾಗಿದ್ದಲ್ಲ. ಸಿದ್ಧರಾಮಯ್ಯನವರು ಪ್ರತ್ಯೇಕ ಧರ್ಮಕ್ಕೆ ನಾವು ಬೇಡಿಕೆಯಿಟ್ಟಾಗ ಚರ್ಚಿಸುವುದಾಗಿ ತಿಳಿಸಿದ್ದಾರಷ್ಟೇ ಎಂದರು.
ಹಿಂದೂ ಒಂದು ಧರ್ಮವಲ್ಲ ಅದೊಂದು ಸಂಸ್ಕೃತಿ. ಸಾಂಸ್ಕೃತಿಕ ದೃಷ್ಠಿಯಿಂದ ಮಾತ್ರ ನಾವು ಹಿಂದೂಗಳು, ಧರ್ಮದ ವಿಚಾರದಲ್ಲಿ ನಾವು ಲಿಂಗಾಯತರು. ನಮ್ಮ ಧರ್ಮಗುರು ಬಸವಣ್ಣನವರು ಎಂದರು. ಪುರಾಣಿಕರು ಕಾಲ್ಪನಿಕವಾಗಿ ಸೃಷ್ಟಿಸಿದ್ದು ಮೂರ್ತಿಪೂಜೆಯಾಗುತ್ತದೆ. ಇಂಥ ಮೂರ್ತಿ ಪೂಜೆಯನ್ನು ಬಸವಣ್ಣನವರು ವಿರೋಧಿಸಿದ್ದರು.
ಲಿಂಗ, ಗುರು, ಜಂಗಮರ ಪೂಜೆ ಮಾಡುತ್ತೇವೆ. ಆದರೆ, ನಾವು ಬಸವಣ್ಣನವರ ಮೂರ್ತಿ ಪೂಜೆ ಮಾಡುತ್ತಿಲ್ಲ, ನಮಗೆ ಧರ್ಮ ಕೊಟ್ಟ ಮಹಾ ಪ್ರವಾದಿ ಬಸವಣ್ಣ ಹಾಗಾಗಿ ಅವರನ್ನು ಎಂದು ಪೂಜಿಸುತ್ತಿದ್ದೇವೆ ಎಂದರು.

























