ಕಾರ್ಮಿಕರಿಗೆ ಸೂರು ಇಲ್ಲ: ಕೋಟೇಷನ್ಗಳಲ್ಲಿಯೂ ಅಕ್ರಮ
ದಾವಣಗೆರೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಶ್ರಮ ಸಾಮರ್ಥ್ಯ ಯೋಜನೆಯಡಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಿತರಿಸಿರುವ ಸುರಕ್ಷತಾ ಕಿಟ್ಗಳಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವೈ. ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು ಮೂರು ಲಕ್ಷ ಕಟ್ಟಡ ಕಾರ್ಮಿಕರಿಗೆ ವಿತರಿಸಲಾದ ಸುರಕ್ಷತಾ ಕಿಟ್ಗಳಲ್ಲಿ ಭಾರೀ ಹಣ ಲೂಟಿ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಆದಿಜಾಂಬವ ಶಾಖಾ ಮಠ ತೆರೆದರೆ ಕಾನೂನು ಹೋರಾಟ: ಸ್ವಾಮೀಜಿ ಎಚ್ಚರಿಕೆ
ಪ್ರತಿ ಕಿಟ್ಗೆ ಮೂರು ಸಾವಿರ ರೂ. ಹೆಚ್ಚುವರಿ ಪಾವತಿ: ಕಾರ್ಮಿಕರಿಗೆ ನೀಡಲಾದ ಪ್ರತಿಯೊಂದು ಸುರಕ್ಷತಾ ಕಿಟ್ನಲ್ಲಿ ಹೆಲ್ಮೆಟ್, ಸೇಫ್ಟಿ ಜಾಕೆಟ್, ಇಯರ್ ಕ್ಯಾಪ್, ರಬ್ಬರ್ ಹ್ಯಾಂಡ್ ಗ್ಲೋವ್ಸ್, ಗಮ್ ಶೂ, ಮಾಸ್ಕ್, ಕನ್ನಡಕ, ಎಲ್ಬೋ ಗಾರ್ಡ್, ನೀ ಗಾರ್ಡ್, ಬ್ಯಾಗ್ ಸೇರಿದಂತೆ ಅಗತ್ಯ ಸುರಕ್ಷತಾ ವಸ್ತುಗಳು ಸೇರಿವೆ. ಇವುಗಳ ಪ್ರಸ್ತುತ ಮಾರುಕಟ್ಟೆ ದರ ಸುಮಾರು ₹1,495 ಮಾತ್ರವಾಗಿದೆ.
ಆದರೆ ಕಲ್ಯಾಣ ಮಂಡಳಿಯು ಈ ಕಿಟ್ಗಳನ್ನು ಸರಬರಾಜು ಮಾಡಿದ ಕಂಪನಿಯಿಂದ ಪ್ರತಿ ಕಿಟ್ಗೆ ₹4,492.37 ವೆಚ್ಚದಲ್ಲಿ ಖರೀದಿಸಿರುವುದು ದಾಖಲೆಗಳಿಂದ ತಿಳಿದುಬರುತ್ತದೆ. ಇದರಿಂದ ಪ್ರತಿ ಕಿಟ್ಗೆ ಸುಮಾರು ₹3,000 ಹೆಚ್ಚುವರಿ ಮೊತ್ತ ಪಾವತಿಸಲಾಗಿದೆ. ಈ ಮೂಲಕ ಒಟ್ಟಾರೆ ಸುಮಾರು ₹90 ಕೋಟಿ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದು ವೈ. ಕುಮಾರ್ ಆರೋಪಿಸಿದರು.
ಇದನ್ನೂ ಓದಿ: ಮೀಟರ್ ಹೆಚ್ಚಾದರೆ ಮೋದಿ – ದರ ಹೆಚ್ಚಾದರೆ ರಾಜ್ಯ ಕಾರಣ: ಇದು ಬಿಜೆಪಿ ಲಾಜಿಕ್
ಕೋಟೇಷನ್ಗಳಲ್ಲಿಯೂ ಅಕ್ರಮ: ನಮ್ಮ ಸಂಘಟನೆ ಹಲವು ಕಂಪನಿಗಳಿಂದ ಪಡೆದಿದ್ದ ಕೋಟೇಷನ್ಗಳಲ್ಲಿ ಕಿಟ್ಗಳ ದರ ₹1,500 ಮೀರಿರಲಿಲ್ಲ. ಆದರೆ ಇಷ್ಟೊಂದು ಹೆಚ್ಚುವರಿ ಮೊತ್ತ ನೀಡಿ ಖರೀದಿ ಮಾಡಿರುವುದು ಹಣ ಲೂಟಿ ಹೊಡೆಯುವ ಉದ್ದೇಶದಿಂದಲೇ ನಡೆದಿರುವ ವ್ಯವಹಾರ ಎಂದು ಅವರು ದೂರಿದರು.
ಕಾರ್ಮಿಕರಿಗೆ ಸೂರು ಇಲ್ಲ: ಸುರಕ್ಷತಾ ಕಿಟ್ಗಳಲ್ಲಷ್ಟೇ ಅಲ್ಲದೆ, ಕಾರ್ಮಿಕರ ವಸತಿ ವಿಷಯದಲ್ಲೂ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಅವರು ಟೀಕಿಸಿದರು. ಮಂಡಳಿಯ ಸೆಸ್ ಹಣವನ್ನು ಬಳಸಿಕೊಂಡು ಶ್ರಮಿಕ ವಸತಿ ಶಾಲೆಗಳನ್ನು ನಿರ್ಮಿಸಲು ಸಚಿವ ಸಂತೋಷ್ ಎಸ್. ಲಾಡ್ ಅನುದಾನ ನೀಡಿದ್ದಾರೆ. ಆದರೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಒಂದೇ ಒಂದು ಮನೆ ನಿರ್ಮಿಸಿ ಕೊಟ್ಟಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ: ಬೆಂಗಳೂರು–ವಿಜಯಪುರ ವಂದೇ ಭಾರತ್, ಹೈಸ್ಪೀಡ್ ಕಾರಿಡಾರ್ಗೆ ಎಂ.ಬಿ. ಪಾಟೀಲ್ ಮನವಿ
ಇಂದಿಗೂ ಬಹುತೇಕ ಕಾರ್ಮಿಕರು ಶೆಡ್ಗಳು, ಬಾಡಿಗೆ ಮನೆಗಳು, ಸ್ಲಂ ಪ್ರದೇಶಗಳು ಹಾಗೂ ಗುಡಿಸಲುಗಳಲ್ಲಿ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲು ಸಚಿವರು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ ಎಚ್ಚರಿಕೆ: ಈ ಅವ್ಯವಹಾರ ಕುರಿತು ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಲಾಗುವುದು. ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ವೈ. ಕುಮಾರ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Metro ದರ ಏರಿಕೆಗೆ ತಾತ್ಕಾಲಿಕ ಬ್ರೇಕ್: ಬೆಂಗಳೂರಿಗರಿಗೆ ರಿಲೀಫ್
ಸಭೆಯಲ್ಲಿ ಭಾಗವಹಿಸಿದವರು: ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ನಿರ್ದೇಶಕ ಎಸ್. ಭರತ್, ಡಿ.ಎನ್. ಪ್ರಸನ್ನ, ಈ. ರಾಜಪ್ಪ, ಕೆ. ರಾಜಪ್ಪ, ಬಿ.ಎಸ್. ಧನ್ಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ, ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಯಲ್ಲೇ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಿಂದ ಸರ್ಕಾರದ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಇದೀಗ ಜೋರಾಗಿದೆ.






















