ದಾವಣಗೆರೆ: ನಗರದೇವತೆ ದುಗ್ಗಮ್ಮದೇವಿಯ ದರ್ಶನಕ್ಕೆಂದು ಬಂದಾಗ ಪಕ್ಷದಿಂದ ಅಧಿಕೃತವಾಗಿ ಟಿಕೆಟ್ ಘೋಷಣೆ ಆಗಿರುವುದಾಗಿ ಕಾರ್ಯಕರ್ತರು ತಿಳಿಸಿದರು, ಬಹಳ ಖುಷಿಯಾಗಿದ್ದು, ಪ್ರತಿಸಲವೂ ಗೆದ್ದಂತೆ ಈ ಬಾರಿಯೂ ದಕ್ಷಿಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ವೇಳೆ ನಮ್ಮ ತಾಯಿಯ ಪರ ಪ್ರಚಾರ ನಡೆಸಿದಾಗ ಬರಿಗಾಲಲ್ಲಿ ಪ್ರಚಾರ ನಡೆಸಿದ್ದು, ಯಾರೂ ಕಾಲು ನೋಡಬೇಡಿ ಅದು ನನ್ನ ಮತ್ತು ದೇವರ ನಡುವೆ ಇರುವ ಸಂಕಲ್ಪ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಒಂದು ಕ್ಷೇತ್ರಕ್ಕೆ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಅದೇ ರೀತಿ ಅಲ್ಲಿರುವ ಅಲ್ಪಸಂಖ್ಯಾತರು ಮೂವತ್ತು ವರ್ಷ ನಮ್ಮ ಅಜ್ಜಾರ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು. ನಾವು ಕೂಡ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಚುನಾವಣೆ ಅಂದರೆ ಒಂದಷ್ಟು ಬೇಸರಗಳು ಮೂಡುವುದು ಸಹಜ. ಶೀಘ್ರದಲ್ಲಿಯೇ ಇವೆಲ್ಲಾ ಸರಿಯಾಗಲಿದೆ. ದಾವಣಗೆರೆ ಶಾಂತಿನಗರ ನಾವೆಲ್ಲಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದರು.
ಚುನಾವಣೆಗೆ ಪ್ರಚಾರ ಆರಂಭಿಸುವುದಲ್ಲ, ಹುಟ್ಟಿನಿಂದಲೇ ನಾವು ಪ್ರಚಾರ ಆರಂಭಿಸಿದ್ದೇವೆ. ಎಲ್ಲರೊಂದಿಗೆ ಮೊದಲಿನಿಂದಲೂ ಒಡನಾಟ ಇಟ್ಟುಕೊಂಡಿದ್ದದ್ದೇವೆ ಹಾಗಾಗಿಯೇ ಪಕ್ಷದಿಂದ ನಮ್ಮನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.





















