ದಾವಣಗೆರೆ: ಬಿಹಾರ ಚುನಾವಣೆ ಫಲಿತಾಂಶ ಕಾಂಗ್ರೇಸ್ಗೆ ಪಾಠವಾಗಿದ್ದು, ಎಲ್ಲೆಲ್ಲಿ ಲೋಪದೋಷವಾಗಿದೆ ಎನ್ನುವುದನ್ನು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಬಿಹಾರದ ಜನತೆಯ ಮನಸ್ಥಿತಿ ಬೇರೆ-ಬೇರೆ. ಕರ್ನಾಟಕದಲ್ಲಿ ಅಹಿಂದಕ್ಕೆ ಹೆಚ್ಚು ಮಹತ್ವವಿದೆ. ಹಾಗಾಗಿ, ಕರ್ನಾಟಕದಲ್ಲಿ ಎಲ್ಲಾ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ. ಅದೇ ರೀತಿ ಬಿಹಾರದಲ್ಲಿ ಎಲ್ಲಾರನ್ನು ಒಗ್ಗೂಡಿಸಲು ಸಾಧ್ಯವಿಲ್ಲ ಎಂದರು.
ಬಿಹಾರ ಚುನಾವಣೆ ಫಲಿತಾಂಶ ಗೆದ್ದರು ಮತ್ತು ಸೋತರೂ ಚರ್ಚೆಯಾಗಬೇಕು. ನಾವು ಏಕೆ ಸೋತೆವು ಎಂದು ಪ್ರಮುಖವಾಗಿ ಚರ್ಚೆ ಆಗಬೇಕು. ಬಿಹಾರದಲ್ಲಿ ನಮ್ಮ ಗ್ಯಾರೆಂಟಿ ಇರಲಿಲ್ಲ ಅವರ ಗ್ಯಾರೆಂಟಿ ಘೋಷಣೆ ಮಾಡಿ ಸಕ್ಸಸ್ ಆದರು ಎಂದರು.
ಓಟ್ ಚೋರಿ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಓಟ್ಚೋರಿ ಬಗ್ಗೆ ಮೊದಲಿಂದಲೂ ಆರೋಪ ಕೇಳಿ ಬರುತ್ತಿದೆ. ಕಾಂಗ್ರೇಸ್ ನವರು ಏನು ಆರೋಪ ಮಾಡಿದ್ದಾರೋ ಅದಕ್ಕೆ ಅವರು ಉತ್ತರ ಕೊಡಬೇಕಿದೆ. ನಮ್ಮ ವರೀಷ್ಠರು ಓಟ್ ಚೋರಿ ಬಗ್ಗೆ ಏನು ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ ಎಂದು ಹೇಳಿದರು.
ಸಿಎಂ ಬದಲಾವಣೆ ವಿಚಾರ ಯಾವುದೇ ಚರ್ಚೆ ಆಗಿಲ್ಲ. ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ, ಐದು ವರ್ಷ ಸಿಎಂ ಆಗಿರುವುದಾಗಿ ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹಾಗಾಗಿ, ಅವರೇ ಇರ್ತಾರೆ. ಸಂಪುಟ ಪುನರ್ರಚನೆ ಹೈಕಮಾಂಡ್ಗೆ ಬಿಟ್ಟ ವಿಚಾರ. ಸಚಿವರಿಗೆ ಕೆಲಸ ಇರುವ ಕಾರಣ ದೆಹಲಿಗೆ ಹೋಗಿ ಬರುತ್ತಿರುತ್ತೇವೆ ಇದರಲ್ಲಿ ಅಂಥ ವಿಶೇಷತೆಯೇನೂ ಇಲ್ಲ ಎಂದರು.
ಸಂಪುಟ ಪುನರ್ರಚನೆ ಹೈಕಮಾಂಡ್ ನಿರ್ಧಾರ, ಅವರು ನಮ್ಮೊಂದಿಗೆ ಚರ್ಚೆ ಮಾಡೋದಿಲ್ಲ. ಹಾಗೊಂದು ವೇಳೆ ಸಂಪುಟ ಪುನರಚನೆಯಾದರೆ ಇನ್ನು ಎರಡು ಸ್ಥಾನವನ್ನು ವಾಲ್ಮೀಕಿ ಸಮಾಜಕ್ಕೆ ನೀಡಬೇಕೆಂದು ಹೈಕಮಾಂಡ್ಗೆ ಮನವಿ ಮಾಡಿದ್ದೇವೆ. ನಮ್ಮ ಸಮುದಾಯದವರಿಗೆ ಒಳ್ಳೇದಾಗುತ್ತೆ ಅದಕ್ಕಾಗಿ ಈ ಬಾರಿ ಕೊಡಲೇಬೇಕು. ನಮ್ಮ ಸಮಾಜದಲ್ಲಿ ಯಾರಿಗೆ ಕೊಟ್ಟರೂ ಪರವಾಗಿಲ್ಲ, ಇಂಥದೇ ಖಾತೆ ಅಥವಾ ಇವರಿಗೆ ಕೊಡಿ ಎಂದು ನಮ್ಮ ಬೇಡಿಕೆ ಏನಿಲ್ಲ ಎಂದರು.


























