ಮೂಡುಬಿದಿರೆ: ಮಹಿಳೆಯ ಜತೆ ಅಸಭ್ಯವಾಗಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಠಾಣೆಯ ಪೊಲೀಸ್ ನಿರೀಕ್ಷಕ ಸಂದೇಶ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಂಗಳವಾರ ಸಂಜೆ ಸೇವೆಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ವರದಿ ಹಾಗೂ ದೂರವಾಣಿ ಸಂಭಾಷಣೆಯಲ್ಲಿ ಅಸಭ್ಯವಾಗಿ ಸಂಭಾಷಣೆ ನಡೆಸಿರುವುದು ಮತ್ತು ಸಮವಸ್ತ್ರ ಧರಿಸಿ ನೃತ್ಯ ಮಾಡುವ ದೃಶ್ಯವು ಮಾಧ್ಯಮಗಳಲ್ಲಿ ಸೋಮವಾರದಿಂದ ಪ್ರಸಾರವಾಗಿತ್ತು.
ಈ ಬಗ್ಗೆ ಎಸಿಪಿ ಶ್ರೀಕಾಂತ್ ಅವರು ಮಂಗಳವಾರ ಪಣಂಬೂರು ಎಸಿಪಿ ಕಚೇರಿಯಲ್ಲಿ ಸಂದೇಶ್ ಅವರನ್ನು ವಿಚಾರಣೆ ನಡೆಸಿ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ವರದಿಯನ್ನು ಪರಿಶೀಲಿಸಿದ ಕಮೀಷನರ್ ಅವರು ಮಹಿಳೆಯ ಜತೆ ದೂರವಾಣಿ ಮೂಲಕ ಅಸಭ್ಯ ಸಂಭಾಷಣೆ ನಡೆಸುವ ಮೂಲಕ ಇಲಾಖೆಯ ಘನತೆಗೆ ಚ್ಯುತಿಯಾಗಿರುವುದನ್ನು ಪರಿಗಣಿಸಿ ಅಮಾನತುಗೊಳಿಸಿದ್ದಾರೆ.























