ಧರ್ಮಸ್ಥಳ: “ಧರ್ಮಸ್ಥಳದ ಹೆಸರಿಗೆ ಕಪ್ಪು ಚುಕ್ಕೆ ಹಚ್ಚಲು ಪಣತೊಟ್ಟ ಕಾಣದ ಕೈಗಳು ಇಂದು ಹೆದರಿವೆ. ಧರ್ಮಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡಬೇಕೆಂಬ ಪಿತೂರಿ ಮುರಿದು ಹೋಗುತ್ತಿದೆ. ಧರ್ಮಸ್ಥಳದ ಮೇಲೆ ನಡೆದ ದಾಳಿಗೆ ಧರ್ಮವೇ ಉತ್ತರವನ್ನು ನೀಡುತ್ತಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಪ್ರಕರಣವನ್ನು NIA ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಧರ್ಮಸ್ಥಳ ಚಲೋ ಹಾಗೂ ಧರ್ಮಸ್ಥಳದಲ್ಲಿ ಧರ್ಮಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.
“ಧರ್ಮಸ್ಥಳ ಐತಿಹಾಸಿಕ ಸ್ಥಳ, ಪವಿತ್ರ ಭೂಮಿ. ಧರ್ಮಸ್ಥಳ – ನಮ್ಮ ಧರ್ಮ, ನಂಬಿಕೆ ಮತ್ತು ಇತಿಹಾಸ ಹಾಗೂ ಧಾರ್ಮಿಕತೆಯ ಭವಿಷ್ಯದ ಸಂಬಂಧ ಹೊಂದಿದೆ. ಧರ್ಮಸ್ಥಳ ಧರ್ಮದ ಸ್ಥಾನ” ಎಂದು ಹೇಳಿದರು.
“ಅಂದು ಇತಿಹಾಸದಲ್ಲಿ ಭಾರತದ ಹಿಂದೂ ದೇವಾಲಯಗಳ ಮೇಲೆ ಆಕ್ರಮಣಗಳು ನಡೆದವು. ಇಂದು ಸಹ ನಮ್ಮ ದೇವಾಲಯಗಳ ಮೇಲೆ ಎಡಪಂಥೀಯ ಸರ್ಕಾರಗಳು, ಕಾಣದ ಕೈಗಳ ಆಕ್ರಮಣ ಮುಂದುವರೆಯುತ್ತಲೇ ಇದೆ. ದೇವಾಲಯಗಳು ನಮ್ಮ ಧರ್ಮದ ಪ್ರಾಣವಾಯು” ಎಂದರು.
“ದೇವಾಲಯಗಳು ಯಾರ ಆಸ್ತಿ ಅಲ್ಲ, ಇದು ಭಕ್ತರ ಆಧ್ಯಾತ್ಮಿಕ ಕೇಂದ್ರ. ಧರ್ಮಸ್ಥಳದ ಪರದ ಹೋರಾಟ ರಾಜಕೀಯವಲ್ಲ, ಇದು ಧರ್ಮ – ಸಂಸ್ಕೃತಿಯ ರಕ್ಷಣೆಗಾಗಿ ನಡೆಯುತ್ತಿರುವ ಪ್ರಾಮಾಣಿಕ ಹೋರಾಟ” ಎಂದು ಜೋಶಿ ಅವರು ಹೇಳಿದರು.