ಮಂಗಳೂರು: ಮಸ್ಕತ್–ಮಂಗಳೂರು ನಡುವಿನ ನೇರ ವಿಮಾನ ಸೇವೆಯನ್ನು ಪುನರಾರಂಭಿಸುವ ಕುರಿತಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬರೆದಿದ್ದ ಪತ್ರಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಉತ್ತರ ನೀಡಿದ್ದು, ಈ ಮಾರ್ಗದಲ್ಲಿ ಮಾರ್ಚ್ ತಿಂಗಳಿಂದ ವಿಮಾನ ಸಂಚಾರ ಪುನರಾರಂಭಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಮಸ್ಕತ್–ಮಂಗಳೂರು ವಿಮಾನ ಸೇವೆ ಪುನರಾರಂಭದ ನಿರ್ಣಯದಿಂದ ವಿದೇಶದಲ್ಲಿ ಉದ್ಯೋಗ ಹಾಗೂ ವ್ಯಾಪಾರ ನಡೆಸುತ್ತಿರುವ ಕರಾವಳಿ ಭಾಗದ ಸಾವಿರಾರು ಕನ್ನಡಿಗರಿಗೆ ಅನುಕೂಲವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೆನಡಾ ಶೂಟೌಟ್ ಪ್ರಕರಣ: ಕನ್ನಡಿಗ ಚಂದನ್ ಕುಮಾರ್ ಪಾರ್ಥಿವ ಶರೀರ ಭಾರತಕ್ಕೆ
ಕೇಂದ್ರ ಸರ್ಕಾರ ಮತ್ತು ವಿಮಾನಯಾನ ಇಲಾಖೆಯೊಂದಿಗೆ ಈ ವಿಷಯದ ಕುರಿತು ಸಮಾಲೋಚನೆ ನಡೆಸಿದ ಬಳಿಕ, ರಾಷ್ಟ್ರೀಯ ವಿಮಾನ ಸಂಸ್ಥೆ Air India ಮಾರ್ಚ್ ತಿಂಗಳಿಂದ ಈ ಮಾರ್ಗದಲ್ಲಿ ವಿಮಾನ ಸಂಚಾರ ಆರಂಭಿಸುವ ನಿರ್ಣಯ ತೆಗೆದುಕೊಂಡಿದೆ ಎಂದು ಸಚಿವರು ತಮ್ಮ ಉತ್ತರ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ನೇರ ವಿಮಾನ ಸೇವೆ ಆರಂಭವಾದರೆ ಒಮಾನ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಸುತ್ತಮುತ್ತಲ ಪ್ರದೇಶದ ಜನರಿಗೆ ಸ್ವದೇಶಕ್ಕೆ ಸುಲಭ ಪ್ರಯಾಣದ ಅವಕಾಶ ದೊರೆಯಲಿದೆ. ಇದರಿಂದ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರಗಳಿಗೂ ಉತ್ತೇಜನ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಅಯ್ಯಪ್ಪ ಸ್ವಾಮಿ ಬಂಗಾರ ಕಳವು ಪ್ರಕರಣ: ಬಳ್ಳಾರಿಗೆ ಮತ್ತೆ ಆಗಮಿಸಿದ ಕೇರಳ SIT ತಂಡ
ಕೋವಿಡ್ ಬಳಿಕ ಸ್ಥಗಿತಗೊಂಡಿದ್ದ ಈ ವಿಮಾನ ಸೇವೆ ಪುನರಾರಂಭವಾಗುತ್ತಿರುವುದು ಕರಾವಳಿ ಭಾಗದ ಜನರಲ್ಲಿ ಹರ್ಷ ಮೂಡಿಸಿದ್ದು, ಹಲವು ವರ್ಷಗಳಿಂದ ಈ ಸೇವೆ ಮರುಾರಂಭಕ್ಕೆ ನಿರಂತರ ಪ್ರಯತ್ನ ನಡೆಸಿದ್ದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ.























