ಮಂಗಳೂರು: ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರ ಬಂಧನದ ಯತ್ನವು ದುರುದ್ದೇಶಪೂರಿತವಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ಧಮನಿಸಲೆಂದೇ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹಿಂದೂ ಮುಖಂಡರನ್ನು ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶರಣ್ ಪಂಪ್ವೆಲ್ ಬಂಧನದ ಯತ್ನ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಕಾಮತ್ ಕದ್ರಿ ಠಾಣೆಗೆ ಧಾವಿಸಿ ಪ್ರಕರಣದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಪೊಲೀಸರ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು. ಪೊಲೀಸರು ವಿಚಾರಣೆ ನಡೆಸುವುದಾದರೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೊದಲು ನೋಟಿಸ್ ನೀಡಬೇಕು. ಅದನ್ನು ನೀಡದೇ ಹೇಗೆ ಏಕಾಏಕಿ ಠಾಣೆಗೆ ಕರೆ ತರುತ್ತಾರೆ? ರಾಜ್ಯದಲ್ಲಿ ಹಿಂದೂಗಳು ನೆಮ್ಮದಿಯಾಗಿ ಇರಬಾರದು ಎಂದು ಸರ್ಕಾರ ನಿರ್ಧರಿಸಿದಂತಿದೆ. ಅದಕ್ಕೆ ತಕ್ಕಂತೆ ಅವರ ಆಣತಿಯಂತೆ ಪೊಲೀಸರು ವರ್ತಿಸುತ್ತಿರುವುದು ಅಕ್ಷಮ್ಯ ಎಂದರು.
ಜಿಲ್ಲೆಯ ಆರ್ಎಸ್ಎಸ್ ನಾಯಕರ ಮನೆಗಳಿಗೆ ಮಧ್ಯರಾತ್ರಿ ನುಗ್ಗುವುದು, ವಿಚಾರಣೆ ನೆಪದಲ್ಲಿ ಹಿಂದೂ ಕಾರ್ಯಕರ್ತರಿಗೆ, ಮುಖಂಡರಿಗೆ ಕಿರುಕುಳ ನೀಡುವುದು, ಆ ಮೂಲಕ ಜಿಲ್ಲೆಯಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸರ ಮೂಲಕ ದಬ್ಬಾಳಿಕೆ ನಡೆಸುತ್ತಿದೆ.
ಇಡೀ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಹಿಂದೂಗಳ ವಿಷಯದಲ್ಲಿ ಕಾನೂನುಬಾಹಿರ ಕ್ರಮಗಳಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲವೆಂದರು.
 
                

