ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಮಂಜುನಾಥ ಭಂಡಾರಿ ಮನವಿ
ಮಂಗಳೂರು: ಕರ್ನಾಟಕದ ಕರಾವಳಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಉದ್ದೇಶದಿಂದ, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಹಲವು ಮಹತ್ವದ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಪ್ರವಾಸೋದ್ಯಮ ವಲಯವು ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆ ಹಾಗೂ ಸ್ಥಳೀಯ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಹಿನ್ನೆಲೆ ಜ.10ರಂದು ಮಂಗಳೂರಿನಲ್ಲಿ ನಡೆದ ಕರಾವಳಿ ಪ್ರವಾಸೋದ್ಯಮ ಮಹತ್ವದ ಮೈಲುಗಲ್ಲುಗಳ ಕುರಿತ ಕಾರ್ಯಕ್ರಮ ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು ಕರಾವಳಿ ಪ್ರದೇಶಕ್ಕೆ ವಿಶೇಷ ಗಮನ ಹರಿಸಬೇಕೆಂದು ಮಂಜುನಾಥ ಭಂಡಾರಿ ತಮ್ಮ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಮಹತ್ವ ಸಾರಲು ಚಿತ್ರಮಂದಿರಗಳಿಗೆ ಬಂದ ‘ಭಾರತಿ ಟೀಚರ್’
ಪ್ರವಾಸೋದ್ಯಮಕ್ಕೆ ಮೂರು ವಲಯಗಳ ರಚನೆಗೆ ಒತ್ತಾಯ: ರಾಜ್ಯದ ಪ್ರವಾಸೋದ್ಯಮವನ್ನು ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಮತ್ತು ಉತ್ತರ ಕರ್ನಾಟಕ ಎಂದು ಮೂರು ಪ್ರತ್ಯೇಕ ವಲಯಗಳಾಗಿ ವಿಂಗಡಿಸಿ, ಪ್ರತಿಯೊಂದು ವಲಯಕ್ಕೂ ಐಎಎಸ್ ದರ್ಜೆಯ ಅಧಿಕಾರಿಗಳನ್ನು ನೇಮಿಸಿ, ಅಭಿವೃದ್ಧಿ ಹಾಗೂ ಅನುಷ್ಠಾನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಯಂ ಉಪನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕಾಲೆಳೆಯುವವರೇ ಜಾಸ್ತಿ ಇರುವಾಗ ಪಾದಗಳು ಸೇರುವುದಾದರೂ ಹೇಗೆ?
ಧಾರ್ಮಿಕ ಮತ್ತು ಮೂಲಸೌಕರ್ಯ ಪ್ರವಾಸೋದ್ಯಮಕ್ಕೆ ಒತ್ತು: ಸುಬ್ರಹ್ಮಣ್ಯ–ಧರ್ಮಸ್ಥಳ–ಮೂಡುಬಿದಿರೆ–ಕಾರ್ಕಳ–ಕೊಲ್ಲೂರು ಮಾರ್ಗದ ರೈಲುಹಳಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕೆಂದು ಅವರು ಕೋರಿದ್ದಾರೆ. ಕೇರಳ ಹಾಗೂ ಗೋವಾ ಮಾದರಿಯಲ್ಲಿ ಕರಾವಳಿ ಅಭಿವೃದ್ಧಿಗೆ ತಜ್ಞರ ತಂಡ ರಚಿಸಿ, ಡಿಪಿಆರ್ (DPR) ಸಿದ್ಧಪಡಿಸುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ದೀರ್ಘಕಾಲಿಕ ಯೋಜನೆ ರೂಪಿಸಬೇಕು ಎಂದಿದ್ದಾರೆ.
ಪಣಂಬೂರು ಬೀಚ್, ರೈಲು–ವಿಮಾನ ಸಂಪರ್ಕಕ್ಕೆ ವಿಶೇಷ ಬೇಡಿಕೆ: ಪಣಂಬೂರು ಬೀಚ್ ಅನ್ನು ಎನ್ಎಂಪಿಎ ವ್ಯಾಪ್ತಿಗೆ ಪಡೆದು ಶಿಪ್ ಕಟ್ಟಿಂಗ್ ಯಾರ್ಡ್ ನಿರ್ಮಾಣದ ಯೋಚನೆಗೆ ತಕ್ಷಣ ತಡೆ ನೀಡಬೇಕು ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಜೊತೆಗೆ, ಎನ್ಎಂಪಿಎ ಸಿಎಸ್ಆರ್ ಅನುದಾನವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಬೇಕೆಂದು ಸೂಚಿಸಲಾಗಿದೆ.
ಇದನ್ನೂ ಓದಿ: ದಾಂಡೇಲಿ: ಹಾರ್ನ್ಬಿಲ್ ಪಕ್ಷಿಗಳ ಹಬ್ಬಕ್ಕೆ ಶುಕ್ರವಾರ ಚಾಲನೆ
ಕರಾವಳಿ ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಲ್ಲಿ ಸೂಕ್ತ ಸೂಚನಾ ಫಲಕಗಳನ್ನು ಅಳವಡಿಸಬೇಕು. ಮಂಗಳೂರು ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ವಂದೇ ಭಾರತ್, ಮೆಟ್ರೋ, ವಿಮಾನ ನಿಲ್ದಾಣ ವಿಸ್ತರಣೆ: ಮಂಗಳೂರು–ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಿಸುವುದು, ಮಂಗಳೂರು–ಉಡುಪಿ ಮೆಟ್ರೋ ಯೋಜನೆ ಕುರಿತು ಗಂಭೀರ ಚಿಂತನೆ ನಡೆಸುವುದು, ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣಾ ಕಾರ್ಯವನ್ನು ತ್ವರಿತಗೊಳಿಸುವುದು ಮನವಿಯಲ್ಲಿರುವ ಪ್ರಮುಖ ಬೇಡಿಕೆಗಳಾಗಿವೆ.
ಇದನ್ನೂ ಓದಿ: ಗಿಲೆನ್–ಬಾರಿ ಸಿಂಡ್ರೋಮ್ ರೋಗಿಗಳಿಗೆ ದುಬಾರಿ ಚಿಕಿತ್ಸೆ ಉಚಿತ
ಹೋಂಸ್ಟೇ, ಬೀಚ್ ನಿರ್ವಹಣೆ ಮತ್ತು ರಿಂಗ್ ರೋಡ್: ಹೋಂಸ್ಟೇ ಹಾಗೂ ರೆಸಾರ್ಟ್ಗಳಿಗೆ ಅನುಮತಿ ನೀಡಲು ಪ್ರತ್ಯೇಕ ವಿಭಾಗ ಸ್ಥಾಪನೆ, ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಬೀಚ್ಗಳ ಮೇಲೆ ನಿರಂತರ ನಿಗಾ ವಹಿಸಿ ಒಪ್ಪಂದ ಉಲ್ಲಂಘನೆ ತಪ್ಪಿಸುವುದು, ಹಾಗೂ ಮಂಗಳೂರು ರಿಂಗ್ರೋಡ್ ಯೋಜನೆಗೆ ಆದ್ಯತೆ ನೀಡಿ ಶೀಘ್ರ ಅನುಷ್ಠಾನಗೊಳಿಸಬೇಕೆಂದು ಮಂಜುನಾಥ ಭಂಡಾರಿ ಕೋರಿದ್ದಾರೆ.
ಈ ಎಲ್ಲಾ ಬೇಡಿಕೆಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕರಾವಳಿ ಪ್ರವಾಸೋದ್ಯಮಕ್ಕೆ ಮಹತ್ತರ ಉತ್ತೇಜನ ನೀಡಬೇಕೆಂದು ಅವರು ಸರ್ಕಾರವನ್ನು ಮನವಿ ಮಾಡಿದ್ದಾರೆ.









