ದಕ್ಷಿಣ ಕನ್ನಡ: “ಪರೀಕ್ಷೆ ಚೆನ್ನಾಗಿ ಬರಿ ಮಗಳೇ…” ಎಂದು ಬೆನ್ನು ತಟ್ಟಿ ಕಳಿಸಿದ್ದ ತಾಯಿ, ಮಗಳು ಮೂರನೇ ಪರೀಕ್ಷೆ ಬರೆದು ಮನೆಗೆ ಬರುವಷ್ಟರಲ್ಲಿಯೇ ಇಹಲೋಕವನ್ನೇ ತ್ಯಜಿಸಿದ್ದಳು.
ಪರೀಕ್ಷೆ ಬರೆದು ಬಂದು ತಾಯಿಯ ಅಪ್ಪುಗೆ ಬಯಸಿದ್ದ ಮಗಳಿಗೆ ಎದುರು ಕಂಡಿದ್ದು, ತಾಯಿಯ ಮೃತದೇಹ. ಮೂರು ಪರೀಕ್ಷೆಗಳನ್ನು ಅತ್ಯುತ್ತಮವಾಗಿ ಬರೆದು ಬಂದ ಮಗಳಿಗೆ ಜಗತ್ತೇ ಮುಳುಗಿ ಹೋದಂತಾಗಿತ್ತು.
ಹರಿಸಿದ ತಾಯಿ ಅರ್ಧದಾರಿಯಲ್ಲಿ ಕೈಬಿಟ್ಟು ಹೋದಾಗ ತಾಯಿಯ ಅಂತ್ಯಕ್ರಿಯೆ ಮುಗಿಸಿ ಮುಂದಿನ ಪರೀಕ್ಷೆಗಳನ್ನು ಎದುರಿಸಿದ್ದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಇಂದು ತಾಯಿಯ ಆಶೀರ್ವಾದದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ನೋವು ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ದಿಶಾ ತನ್ನ ತಾಯಿಯ ಮಾತಿನಂತೆ ಅಚ್ಚುಕಟ್ಟಾಗಿ ಪರೀಕ್ಷೆ ಬರೆದಿದ್ದಾಳೆ. ತಾಯಿ ನೆನಪಿನಲ್ಲಿ ಪರೀಕ್ಷೆ ಎದುರಿಸಿದ್ದ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಪಡೆದು ತನ್ನ ಅಂಕವನ್ನು ತಾಯಿಗೆ ಸಮರ್ಪಿಸಿದ್ದಾಳೆ.
ಮುಕ್ಕೋಟಿ ದೇವರಿಗೂ ಮಿಗಿಲಾದವಳು ತಾಯಿಯನ್ನು ಕಳೆದುಕೊಂಡ ದುಃಖದಲ್ಲಿ ದಿಶಾ ಮಾಡಿದ ಸಾಧನೆ ನಿಜಕ್ಕೂ ಶ್ಲಾಘನೀಯ. ದಿಶಾಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಜನತೆ ಹಾರೈಸುತ್ತಿದೆ.
ಮುಂದಿನ ದಿನಗಳಲ್ಲಿ ಸಿಎ ಮಾಡುವ ಗುರಿಯನ್ನು ಹೊಂದಿರುವ ದಿಶಾ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ವಿದ್ಯಾರ್ಥಿ ಸ್ನೇಹಿ ಭೋಧನೆ, ಕಲಿಕೆಗೆ ಪೂರಕ ವಾತಾವರಣ, ಸಿಲೆಬಸ್ ಬೇಗ ಮುಗಿಸಿರುವುದು, ನಿರಂತರವಾಗಿ ಪೂರಕ ಪರೀಕ್ಷೆಗಳನ್ನು ಮಾಡಿರುವುದು ಸಾಧನೆ ಮಾಡಲು ಪೂರಕವಾಯಿತು ಎಂದು ತಿಳಿಸಿದ್ದಾರೆ.























