ಸುರತ್ಕಲ್: ಶಾಸಕರ ಭವನದ ಪುನರ್ ನವೀಕರಣ ಮತ್ತು ಪೀಠೋಪಕರಣಗಳ ಖರೀದಿಯಲ್ಲಿ 4ಜಿ ನಿಯಮದ ವಿನಾಯಿತಿ ನೀಡಿರುವ ಕುರಿತು ಸ್ಪಷ್ಟ ಮಾಹಿತಿ ನೀಡದ ಸ್ಪೀಕರ್ ಮತ್ತು ರಾಜ್ಯ ಸರ್ಕಾರದ ನಿಲುವನ್ನು ಶಾಸಕ ಡಾ. ಭರತ್ ಶೆಟ್ಟಿ ವೈ ತೀವ್ರವಾಗಿ ಟೀಕಿಸಿದ್ದಾರೆ.
ಶಾಸಕರ ಭವನ ವ್ಯಯದ ಕುರಿತು ಹಲವು ಪ್ರಶ್ನೆಗಳು ಎದ್ದಿರುವ ಸಮಯದಲ್ಲಿ, “ಸರ್ಕಾರ ಮತ್ತು ಸ್ಪೀಕರ್ ಕಚೇರಿಯಿಂದ ಬರುವ ಉತ್ತರಗಳು ಹಾರಿಕೆಯ ರೀತಿಯಲ್ಲಿದ್ದು, ನಿಜಾಂಶಗಳನ್ನು ಮರೆಮಾಡುವ ಪ್ರಯತ್ನಗಳು ಮಾತ್ರ ಕಾಣಿಸುತ್ತಿವೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪ್ರಸ್ತುತ ಅವಧಿಯ ವೆಚ್ಚದ ಕುರಿತು ನೇರ ಉತ್ತರ ಕೊಡದೆ, ಹಿಂದಿನ ಅವಧಿಯ ಕೆಲಸಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂಬುದಷ್ಟೇ ಹೇಳುತ್ತಿದ್ದಾರೆ. ಇದು ಜನರಲ್ಲಿ ಅನುಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂದು ಆರೋಪಿಸಿದರು.
ಸಾರ್ವಜನಿಕರ ಕಡತಗಳು ತಿಂಗಳುಗಟ್ಟಲೆ ಕಚೇರಿಯಲ್ಲಿ ಬಾಕಿಯಾಗಿವೆ: ತಮ್ಮ ಕೆಲಸಕ್ಕಾಗಿ ಬಂದ ನಾಗರಿಕರು ಗಂಟೆಗಳ ಕಾಲ ಸಾಲಿನಲ್ಲಿ ನಿಂತು, “ಇಂದು ಕೆಲಸ ಆಗುವುದಿಲ್ಲ” ಎಂಬ ಉತ್ತರದೊಂದಿಗೆ ಹಿಂತಿರುಗುತ್ತಿದ್ದಾರೆ ನಾಗರಿಕ ಸೇವಾ ಲಭ್ಯತೆ ಗಂಭೀರವಾಗಿ ಕುಂಠಿತವಾಗಿದೆ. ಇದಕ್ಕೆ ಸರ್ಕಾರವೇ ಜವಾಬ್ದಾರ ಎಂದು ಸ್ಪಷ್ಟವಾಗಿ ಆರೋಪಿಸಿದ ಅವರು, “ಸಿಬ್ಬಂದಿಯನ್ನು ಅಗತ್ಯಕ್ಕಿಂತ ಹೆಚ್ಚು ಜನಗಣತಿಗೆ ಬಳಸುವ ಮೂಲಕ ಜನಸೇವೆಯೇ ಸ್ಥಗಿತವಾಗಿದೆ” ಎಂದರು.
























