ಮಂಗಳೂರು: ಪ್ರಸಿದ್ಧ ಅಪರಾಧ ಪ್ರಕರಣದಲ್ಲಿ ಆರೋಪಿ ಬುರುಡೆ ಚಿನ್ನಯ್ಯನ 12 ದಿನಗಳ ಎಸ್ಐಟಿ (ವಿಶೇಷ ತನಿಖಾ ದಳ) ಕಸ್ಟಡಿ ಅವಧಿ ಮಂಗಳವಾರ ಅಂತ್ಯಗೊಂಡ ಹಿನ್ನಲೆಯಲ್ಲಿ, ಅಧಿಕಾರಿಗಳು ಅವನನ್ನು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಮಧ್ಯಾಹ್ನ 3 ಗಂಟೆಗೆ ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ವ್ಯವಹಾರಿಕ ನ್ಯಾಯಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯೇಂದ್ರ. ಹೆಚ್.ಟಿ ಅವರ ಸಮ್ಮುಖದಲ್ಲಿ ವಿಚಾರಣೆ ನಡೆಯಿತು.
ಎಸ್ಐಟಿ ಅಧಿಕಾರಿಗಳು ಪ್ರಕರಣದ ತೀವ್ರತೆ ಹಾಗೂ ತನಿಖೆಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡುತ್ತಾ, ಆರೋಪಿ ಚಿನ್ನಯ್ಯನನ್ನು ಮತ್ತಷ್ಟು ದಿನಗಳ ಕಾಲ ಕಸ್ಟಡಿಯಲ್ಲಿ ಇರಿಸಬೇಕೆಂದು ನ್ಯಾಯಾಲಯವನ್ನು ಮನವಿ ಮಾಡಿದರು. ತನಿಖೆಯಲ್ಲಿ ಇನ್ನೂ ಅನೇಕ ಮಹತ್ವದ ಸುಳಿವುಗಳು, ದಾಖಲೆಗಳು ಹಾಗೂ ಆರೋಪಿ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳ ವಿಚಾರಣೆ ಬಾಕಿ ಉಳಿದಿರುವುದರಿಂದ ಹೆಚ್ಚಿನ ಕಾಲಾವಕಾಶ ಬೇಕೆಂದು ಅಧಿಕಾರಿಗಳು ವಾದ ಮಂಡಿಸಿದರು.
ನ್ಯಾಯಾಲಯವು ಅಧಿಕಾರಿಗಳ ಮನವಿಯನ್ನು ಅಂಗೀಕರಿಸಿ, ಬುರುಡೆ ಚಿನ್ನಯ್ಯನನ್ನು ಸೆಪ್ಟೆಂಬರ್ 6ರವರೆಗೆ ಎಸ್ಐಟಿ ಕಸ್ಟಡಿಗೆ ವಿಸ್ತರಿಸಿದೆ. ಈ ಅವಧಿಯಲ್ಲಿ ತನಿಖಾಧಿಕಾರಿಗಳು ಆರೋಪಿ ನೀಡುವ ಮಾಹಿತಿ ಆಧರಿಸಿ ಪ್ರಕರಣದ ಗಂಭೀರ ಅಂಶಗಳನ್ನು ಬಯಲಿಗೆಳೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ವಿಚಾರದಲ್ಲಿ ಈಗಾಗಲೇ ಹಲವು ಸಾಕ್ಷ್ಯಾಧಾರಗಳು ಸಂಗ್ರಹಗೊಂಡಿದ್ದು, ಚಿನ್ನಯ್ಯನ ಹೇಳಿಕೆ ಆಧರಿಸಿ ಇನ್ನಷ್ಟು ಜನರ ಹೆಸರುಗಳೂ ತನಿಖೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.