ಚಿತ್ರದುರ್ಗ: ನಾನು ಭದ್ರಾ ಮೇಲ್ದಂಡೆ ಯೋಜನೆ ಅನುದಾನ ವಿಷಯದಲ್ಲಿ ಉಡಾಫೆ ಮಾತನಾಡಿದ್ದೇನೆಂಬ ಸಂಸದ ಗೋವಿಂದ ಕಾರಜೋಳ ಆರೋಪ ನಾನೇ ಒಪ್ಪಿಕೊಂಡು, ಅವರ ಕಾಲಿಗೆ ಬೀಳುವೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5300 ಕೋಟಿ ರೂ. ಬಿಡುಗಡೆಗೆ ಒತ್ತಾಯಿಸಿದ್ದನ್ನೇ ಸಂಸದರು ಉಡಾಫೆ ಎಂದು ಟೀಕಿಸಿದರೆ ಬೇಸರವಿಲ್ಲ. ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಿದರೆ ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸುವೆ ಎಂದು ತಿಳಿಸಿದರು.
ಎಂಪಿ ಚುನಾವಣೆ ವೇಳೆ ನಾನು ಗೆದ್ದರೆ ಮೂರೇ ತಿಂಗಳಲ್ಲಿ ಹಣ ತರುವುದಾಗಿ ಕಾರಜೋಳ ತಿಳಿಸಿದ್ದರು. ಅದನ್ನು ನೆನಪು ಮಾಡುವೆ. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಎಲ್ಲ ರೀತಿಯ ಮನವಿ, ಬೇಡಿಕೆ, ಒತ್ತಡ ಮಾಡಲಾಗುತ್ತಿದೆ. ಅಗತ್ಯ ದಾಖಲೆ ಸಲ್ಲಿಸಲಾಗುತ್ತಿದೆ. ಆದರೂ ಕೇಂದ್ರ ಘೋಷಿತ ಅನುದಾನ ಬಿಡುಗಡೆ ಆಗಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮುಂದಿನ ಹತ್ತು ವರ್ಷದ ಒಳಗೆ ಕಲ್ಯಾಣನಾಡಲ್ಲಿ ಪ್ರಾದೇಶಿಕ ಸಮಾನತೆ
ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, ಭದ್ರೆಗಾಗಿ ಅವರು ಘೋಷಿಸಿದ್ದ ಅನುದಾನ ಕೇಳುವುದು ಉಡಾಫೆ ಹೇಗೆ ಆಗುತ್ತದೆ. ಸಂಸದರ ಮಾತು ತಪ್ಪು ಎಂದು ಬೇಸರಿಸಿದರು.
ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ ಮಾತನಾಡಿ, ಚುನಾವಣೆ ಸಂದರ್ಭ ಭದ್ರೆಯನ್ನು ರಾಷ್ಟ್ರೀಯ ಯೋಜನೆ ಜೊತೆಗೆ ಬಜೆಟ್ನಲ್ಲಿ 5,300 ಕೋಟಿ ರೂ. ಘೋಷಿಸಿ, ಈಗ ಇಲ್ಲಸಲ್ಲದ ಮಾತನಾಡುವುದು ಜಿಲ್ಲೆಗೆ ಮಾಡುವ ದ್ರೋಹ ಎಂದು ದೂರಿದರು.























