ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಯು ತನ್ನ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅಗ್ರಸ್ಥಾನ ಪಡೆದಿದ್ದು, 2024-25ರಲ್ಲಿ 155.95 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ.
ರಾಜ್ಯದ `ಎ’ ಗ್ರೇಡ್ ದೇವಾಲಯಗಳ ಪೈಕಿ ಕರಾವಳಿ ದೇವಾಲಯಗಳೇ ಪಾರಮ್ಯ ಮೆರೆದಿರುವುದು ಕಂಡು ಬಂದಿದೆ. ವರ್ಷಾಂತ್ಯಕ್ಕೆ ಕರಾವಳಿ ದೇಗುಲಗಳಿಗೆ ಪ್ರವಾಸಿಗರ ಆಗಮನದಲ್ಲಿ ಏರಿಕೆಯಾಗಿದ್ದು, ಒಂದೇ ತಿಂಗಳಲ್ಲಿ ಶೇ. 5ರಿಂದ 10ರಷ್ಟು ಆದಾಯ ಪ್ರಗತಿ ಕಂಡಿದೆ. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕಾ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಸ್ಥಾನ ಪಡೆದುಕೊಂಡಿವೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ 2023-24ರಲ್ಲಿ 146.1 ಕೋಟಿ ಇದ್ದ ಆದಾಯ 2024-25ರಲ್ಲಿ 155.95 ಕೋಟಿಗೆ ತಲುಪಿದೆ. ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ 2023-24ರಲ್ಲಿ 63.23 ಕೋಟಿ ಆದಾಯ ಬಂದಿತ್ತು. 2024-25ರಲ್ಲಿ 71.93 ಕೋಟಿಗೆ ತಲುಪಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇಗುಲದ ಆದಾಯ 2023-24ರಲ್ಲಿ 56.67 ಕೋಟಿ ಬಂದಿತ್ತು. 2024-25ರಲ್ಲಿ 50.68 ಕೋಟಿಗೆ ಕುಸಿದಿದೆ.
ನಂಜನಗೂಡು ಶ್ರೀಕಂಠೇಶ್ವರ ದೇಗುಲದ ಆದಾಯ 30.36 ಕೋಟಿಯಿಂದ 36.12 ಕೋಟಿಗೆ ಏರಿಕೆ ಆಗಿದೆ. ಸವದತ್ತಿ ಯಲ್ಲಮ್ಮ ದೇಗುಲದ ಆದಾಯ 25.80 ಕೋಟಿಯಿಂದ 29.95 ಕೋಟಿಗೆ ಏರಿಕೆ ಆಗಿದೆ. ಯಡಿಯೂರು ಸಿದ್ಧಲಿಂಗೇಶ್ವರ ದೇಗುಲದ ಆದಾಯ 35.49 ಕೋಟಿಯಿಂದ 29.82 ಕೋಟಿಗೆ ಕುಸಿದಿದೆ.
ಹುಲಿಗಿಯ ಹುಲಿಗೆಮ್ಮ ದೇಗುಲದ ಆದಾಯ 16.29 ಕೋಟಿಯಿಂದ 17.30 ಕೋಟಿಗೆ ಏರಿಕೆಯಾಗಿದೆ. ಮಂದಾರ್ತಿ ದುರ್ಗಾಪರಮೇಶ್ವರಿ ದೇಗುಲದ ಆದಾಯ 15.27 ಕೋಟಿಯಿಂದ 16.54 ಕೋಟಿಗೆ ಏರಿಕೆ ಕಂಡಿದೆ. ಘಾಟಿ ಸುಬ್ರಹ್ಮಣ್ಯ ದೇಗುಲದ ಆದಾಯ 12.73 ಕೋಟಿಯಿಂದ 13.31 ಕೋಟಿಗೆ ತಲುಪಿದೆ. ಬೆಂಗಳೂರಿನ ಬನಶಂಕರಿ ದೇಗುಲದ ಆದಾಯ 11.95 ಕೋಟಿಯಿಂದ 11.38 ಕೋಟಿಗೆ ಕುಸಿತ ಕಂಡಿದೆ.









