ಗ್ರೇಟರ್ ಬೆಂಗಳೂರು. ಬೆಂಗಳೂರಿನಲ್ಲಿ ಬಿಬಿಎಂಪಿ ಬದಲಾಗಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಾರ್ಡ್ಗಳ ಸಂಖ್ಯೆಯನ್ನು 365ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ 198 ವಾರ್ಡ್ಗಳು ಇದ್ದವು. ಇದೀಗ ಹೊಸದಾಗಿ ಜಿಬಿಎ ಬಂದ ನಂತರ ಬೆಂಗಳೂರಿನ ವಿಸ್ತಾರ ಹೆಚ್ಚಾಗಿದ್ದು, ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ನಗರದ ಶಾಸಕರು ಬೇಡಿಕೆ ಇಟ್ಟಿದ್ದರು.
ಶಾಸಕರ ಬೇಡಿಕೆಯಂತೆ ಪ್ರಾಧಿಕಾರವು ತನ್ನ ವ್ಯಾಪ್ತಿಯ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇ ಆದಲ್ಲಿ ದೇಶದಲ್ಲೇ ಅತಿದೊಡ್ಡ ನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಇತ್ತೀಚೆಗೆ ಬೆಂಗಳೂರು ನಗರ ವ್ಯಾಪ್ತಿಯ ಶಾಸಕರ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿಗಳು ನಗರದ ರಸ್ತೆ ಗುಂಡಿಗಳನ್ನು ಮುಚ್ಚುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಸೂಚನೆ ಕೊಟ್ಟಿದ್ದರು.
ಈ ವೇಳೆ ಸಚಿವರು ಮತ್ತು ಶಾಸಕರು ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂದು ಕಾಂಗ್ರೆಸ್ ಶಾಸಕರು ಸಿಎಂಗೆ ಮನವರಿಕೆ ಮಾಡಿದ್ದರು. ವಾರ್ಡ್ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾದರೆ ಕಾಂಗ್ರೆಸ್ಗೆ ಅನುಕೂಲವಾಗಲಿದೆ. 198 ವಾರ್ಡ್ಗಳಲ್ಲಿ ಚುನಾವಣೆ ನಡೆಸಿದರೆ ಬಿಜೆಪಿಗೆ ಅನುಕೂಲವಾಗಿದೆ. ನಗರ ಮತದಾರರು ಬಿಜೆಪಿ ಕಡೆ ಒಲವು ತೋರುತ್ತಾರೆ.
2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಐದು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಹೀಗಾಗಿ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದರೆ 5 ಪಾಲಿಕೆಗಳಲ್ಲಿ ಕನಿಷ್ಠ 2ರಿಂದ 3 ಪಾಲಿಕೆಗಳಲ್ಲಿ ಅಧಿಕಾರ ಹಿಡಿಯಬಹುದೆಂದು ಸಚಿವರು ಮತ್ತು ಶಾಸಕರು ಸಿಎಂಗೆ ಅಂಕಿಸಂಖ್ಯೆ, ಮತದಾರರ ಪಟ್ಟಿ, ಹಿಂದೆ ಪಡೆದಿದ್ದ ಮತ ವಿವರ ಇತ್ಯಾದಿಯನ್ನು ವಿವರಿಸಿದ್ದರು.
ಶಾಸಕರ ಬೇಡಿಕೆಗೆ ಬಹುತೇಕ ಅಸ್ತು ಎಂದಿರುವ ಸಿಎಂ ವಾರ್ಡ್ ಹೆಚ್ಚಳ ಕುರಿತು ಬಿಬಿಎಂಪಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಹಾಗೂ ಡಿಸಿಎಂ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ಭರವಸೆಯನ್ನು ಕೊಟ್ಟಿದ್ದರು
ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿಎಂಗೆ ಶಾಸಕರು ಮಾಡಿದ ಮನವಿ
- ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 365 ವಾರ್ಡ್ಗಳನ್ನು ರಚಿಸಬೇಕು
- ಬೆಂಗಳೂರು ಉತ್ತರದಲ್ಲಿ 75, ದಕ್ಷಿಣ 75, ಕೇಂದ್ರ 63, ಪೂರ್ವ 50, ಬೆಂಗಳೂರು ಪಶ್ಚಿಮದಲ್ಲಿ 102 ವಾಡ್ರ್ಗಳನ್ನು ರಚಿಸಬೇಕು
- 2011ರ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್ಗಳನ್ನು ನಿರ್ಮಾಣ ಮಾಡಬೇಕು
- ಪ್ರತಿ ವಾರ್ಡ್ಗೆ ಸರಾಸಲ 17 ಸಾವಿರದಿಂದ 35 ಸಾವಿರ ಮತದಾರರನ್ನು ನಿಗದಿಪಡಿಸಬೇಕು
- ಸವಾರ್ಡ್ ಸಂಖ್ಯೆ ಹೆಚ್ಚಳವಾದರೆ ಪಕ್ಷಕ್ಕೆ ದುಡಿದಿರುವ ಮುಖಂಡರಿಗೆ ಟಿಕೆಟ್ ನೀಡಬಹುದು.
- ಇದರಿಂದ ರಾಜಕೀಯ ಪ್ರಾತಿನಿಧ್ಯವನ್ನು ಕಲ್ಪಿ ಸಿದಂತಾಗುತ್ತದೆ.
- ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ