ಬೆಳಗಾವಿ: ಖಾನಾಪುರ ತಾಲೂಕಿನ ನಾಗರಗಾಳಿ ಅರಣ್ಯ ವಲಯದ ದೇವರಾಯಿ ಗ್ರಾಮದ ಸಮೀಪದ ಕೃಷಿ ಜಮೀನುಗಳಲ್ಲಿ ಎರಡು ಕಾಡಾನೆಗಳು ಸತ್ತಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಆಹಾರಕ್ಕಾಗಿ ಹೊಲಗಳಿಗೆ ಬಂದಿದ್ದ ಆನೆಗಳು ಕಬ್ಬು ಮತ್ತು ಭತ್ತದ ಗದ್ದೆ ಪಕ್ಕದಲ್ಲಿ ಮೃತಪಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ, “ಆನೆಗಳು ವಿದ್ಯುತ್ ಶಾಕ್ಗೆ ಒಳಗಾಗಿ ಸತ್ತಿರಬಹುದು” ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ರೈತರು ಬೆಳೆಗಳನ್ನು ಕಾಡುಪ್ರಾಣಿಗಳ ದಾಳಿಯಿಂದ ರಕ್ಷಿಸಲು ಅಕ್ರಮವಾಗಿ ವಿದ್ಯುತ್ ತಂತಿಗಳನ್ನು ಹೊಲಗಳ ಸುತ್ತ ಹರಿಬಿಟ್ಟಿದ್ದರು ಎನ್ನುವ ಮಾಹಿತಿ ದೊರೆತಿದೆ.
ಸ್ಥಳದಲ್ಲಿ ಅರಣ್ಯ ಅಧಿಕಾರಿ ಹಾಗೂ ಪಶುವೈದ್ಯರು ಪರಿಶೀಲನೆ ನಡೆಸಿದ್ದು, ಆನೆಗಳ ಮರಣದ ನಿಖರ ಕಾರಣ ಪತ್ತೆಹಚ್ಚಲು ಮಾದರಿ ಸಂಗ್ರಹಿಸಿ, ಪೋಸ್ಟ್ಮಾರ್ಟಂ ನಡೆಸಲು ಕ್ರಮ ಕೈಗೊಂಡಿದ್ದಾರೆ. ಈ ನಡುವೆ, ಆನೆಗಳ ಸಾವಿನ ಹಿನ್ನೆಲೆಯಲ್ಲಿ ಸ್ಥಳೀಯ ಪರಿಸರ ಪ್ರೇಮಿಗಳು ಮತ್ತು ಗ್ರಾಮಸ್ಥರು ದುಃಖ ವ್ಯಕ್ತಪಡಿಸಿದ್ದು, “ಅರಣ್ಯ ಪ್ರದೇಶಗಳಲ್ಲಿ ಮಾನವ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.


























