ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಅನೇಕ ಬಾರಿ ಹೇಳಿದ್ದೇನೆ, ಈಗಲೂ ಹೇಳುತ್ತೇನೆ, ಇದರಲ್ಲಿ ಬದಲಾವಣೆಯ ಮಾತೇ ಇಲ್ಲ, ಹೈಕಮಾಂಡ್ ಹಲವಾರು ವಿಚಾರಗಳಿಗೆ ಅವರನ್ನು ಕರೆಯುತ್ತಾರೆ, ಅವರು ಮಾತನಾಡಿಕೊಂಡು ಬರುತ್ತಾರೆ, ಹೀಗಾಗಿ ಬದಲಾವಣೆಯಾಗುವುದಿಲ್ಲ ಎಂದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಆ ರೀತಿ ಆಗಬಹುದು ಈ ರೀತಿ ಆಗಬಹುದು ಅನ್ನೋದು ಈಗಲೇ ಏಕೆ? ಈ ಹಿಂದೆ ಮೊದಲು ತಾವು ಮುಖ್ಯಮಂತ್ರಿಯಾಗಬೇಕು ಎಂದು ಡಿ.ಕೆ. ಶಿವಕುಮಾರ ಅವರು ಕೇಳಿದ್ದರು, ಹೀಗಾಗಿ ಗೊಂದಲ ಇತ್ತು, ಈಗ ಯಾವ ಗೊಂದಲವೂ ಇಲ್ಲ, ಹೈಕಮಾಂಡ್ ಸಹ ಈ ವಿಷಯವಾಗಿ ಸ್ಪಷ್ಟನೆ ನೀಡಿದೆ, ಶಾಸಕಾಂಗ ಪಕ್ಷದಲ್ಲಿ ಇಷ್ಟು ವರ್ಷಕ್ಕೆ ಮುಖ್ಯಮಂತ್ರಿ ಎಂದು ತೀರ್ಮಾನ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದರು.






















