ಬೆಳಗಾವಿ : ಬೆಳಗಾವಿ ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೇವಲ ಎರಡು ದಿನಗಳೊಳಗೆ 19 ಜಿಂಕೆಗಳು ಅಸಹಜವಾಗಿ ಮೃತಪಟ್ಟಿರುವ ಘಟನೆ ಮೃಗಾಲಯ ಆಡಳಿತ ಸೇರಿದಂತೆ ಅರಣ್ಯ ಇಲಾಖೆಯಲ್ಲೂ ಆತಂಕ ಸೃಷ್ಟಿಸಿದೆ. ಈ ಘಟನೆಗೆ ತೀವ್ರ ವ್ಯಾಕುಲ ವ್ಯಕ್ತಪಡಿಸಿರುವ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ತಕ್ಷಣವೇ ವಿಶೇಷ ತನಿಖೆಗೆ ಆದೇಶ ನೀಡಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ: ಜಿಂಕೆಗಳು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚು. ಸೋಂಕು ನೀರಿನ ಮೂಲಕವೋ, ಅಥವಾ ಆಹಾರದ ಮೂಲಕವೋ, ಅಥವಾ ಮೃಗಾಲಯದ ಸುತ್ತಮುತ್ತಲೆ ಇರುವ ಬೆಕ್ಕುಮರಿಗಳು/ಇತರೆ ಸಾಕುಪ್ರಾಣಿಗಳ ಮೂಲಕವೋ ಹರಡಿದಿರುವುದನ್ನು ಶಂಕಿಸಲಾಗಿದೆ. ಮೃಗಾಲಯದಲ್ಲಿ ಇನ್ನೂ ಇರುವ ಪ್ರಾಣಿಗಳಿಗೆ ಸೋಂಕು ತಗುಲದಂತೆ ಕಠಿಣ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ತಜ್ಞರ ಸಮಿತಿ ರಚನೆ: ಸಚಿವ ಖಂಡ್ರೆ ಅವರು ತಕ್ಷಣವೇ ಪಶುವೈದ್ಯರು, ಅರಣ್ಯ ತಜ್ಞರು ಹಾಗೂ ವನ್ಯಜೀವಿ ಆರೋಗ್ಯ ವಿಭಾಗದ ಅಧಿಕಾರಿಗಳು ಇವರನ್ನೊಳಗೊಂಡ ವಿಶೇಷ ಸಮಿತಿ ರಚಿಸಲು ಸೂಚನೆ ನೀಡಿದ್ದಾರೆ.
ಈ ಸಮಿತಿ, ಜಿಂಕೆಗಳ ಸಾವಿನ ಕಾರಣ, ಮೃಗಾಲಯದ ನೀರಿನ ಗುಣಮಟ್ಟ, ಆಹಾರದ ಗುಣಮಟ್ಟ, ಸಿಬ್ಬಂದಿಯ ಅಲಕ್ಷ್ಯ ಉಂಟಾಗಿದೆಯೇ? ಎಂಬುದರ ಬಗ್ಗೆ ಸಂಪೂರ್ಣ ವರದಿ ನೀಡಲಿದೆ.
ವಿಷಯದ ಗಂಭೀರತೆ ಹೆಚ್ಚಿಸುವ ಅಂಶಗಳು: ಜಿಂಕೆಗಳು ಈ ರೀತಿಯಲ್ಲಿ ಸಾಮೂಹಿಕವಾಗಿ ಸಾವನ್ನಪ್ಪುವುದು ಸಾಮಾನ್ಯವಲ್ಲ. ಇದು ಮೃಗಾಲಯದ ನಿರ್ವಹಣೆ ಮತ್ತು ಆರೋಗ್ಯ ಕ್ರಮಗಳು. ಸ್ಯಾನಿಟೇಷನ್ ವ್ಯವಸ್ಥೆ ಹಾಗೂ ಇವುಗಳ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವಿದ್ದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಈಶ್ವರ ಖಂಡ್ರೆ ಆದೇಶ ನೀಡಿದ್ದಾರೆ.


























