ಬೆಳಗಾವಿ: ಬೆಳಗಾವಿ ಜಿಲ್ಲೆಯ ಚೋರ್ಲಾ ಘಾಟ್ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ನಗದು ದರೋಡೆ ಆರೋಪಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ಸಂಗ್ರಹಿಸುವ ಸಲುವಾಗಿ, ಸಿಪಿಐ ಸೇರಿದಂತೆ ಪೊಲೀಸರ ತಂಡವು ಮಹಾರಾಷ್ಟ್ರದ ನಾಸಿಕ್ಗೆ ಹೋಗಿದೆ.
2025 ಅಕ್ಟೋಬರ್ 22 ರಂದು ನಡೆದಿದೆ ಎಂದು ಹೇಳಲಾಗಿರುವ ಅಮಾನ್ಯಗೊಂಡ ನೋಟುಗಳ ದರೋಡೆ ಪ್ರಕರಣದ ತನಿಖೆಗೆ ಸಹಕಾರ ಕೋರಿ ನಾಸಿಕ್ ಪೊಲೀಸರು ಬೆಳಗಾವಿ ಪೊಲೀಸರಿಗೆ ಪತ್ರ ಬರೆದಿದ್ದರು.
ಕಳೆದ ದಿ. 19ರಂದೇ ಸಂಯುಕ್ತ ಕರ್ನಾಟಕ ಪತ್ರಿಕೆ ನಾಸಿಕ್ ಪೊಲೀಸರ ಪತ್ರವನ್ನು ಆಧರಿಸಿ ಸುದ್ದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಪೊಲೀಸ್ ಠಾಣೆಯಲ್ಲಿ 2026 ರ ಜನವರಿ 1 ರಂದು ರಿಯಲ್ ಎಸ್ಟೇಟ್ ಏಜೆಂಟ್ ಸಂದೀಪ್ ಪಾಟೀಲ್ ದೂರು ದಾಖಲಿಸಿದ್ದರು. ದಾಖಲಿಸಿದ ದೂರಿನಿಂದ ಉದ್ಭವವಾಗಿದೆ.
ದೂರಿನ ಪ್ರಕಾರ, ಗೋವಾದಿಂದ ಗುಜರಾತಿನ ಅಹಮದಾಬಾದ್ನಲ್ಲಿರುವ ಆಶ್ರಮವೊಂದಕ್ಕೆ ಕರ್ನಾಟಕದ ಮೂಲಕ ಎರಡು ಕಂಟೈನರ್ಗಳಲ್ಲಿ ಸುಮಾರು 400 ಕೋಟಿ ಮೌಲ್ಯದ ಅಮಾನ್ಯಗೊಂಡ ನಗದು ಸಾಗಿಸಲಾಗುತ್ತಿತ್ತು. ಆ ಕಂಟೈನರ್ಗಳನ್ನು ಚೋರ್ಲಾ ಘಾಟ್ನಲ್ಲಿ ತಡೆದು ನಗದು ದೋಚಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಕಾರ್ಯಾಚರಣೆ ಕುರಿತು ತನಗೆ ಮಾಹಿತಿ ಇದೆ ಎಂಬ ಅನುಮಾನದಿಂದ ತನ್ನನ್ನು ಅಪಹರಿಸಿ ಹಲ್ಲೆ ನಡೆಸಲಾಗಿದೆ ಎಂದೂ ದೂರುದಾರ ಆರೋಪಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಮಹಾರಾಷ್ಟ್ರ ಪೊಲೀಸರು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದು, ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.






















