ಪಾರ್ಲಿಮೆಂಟ್ ಒಳಗೆ ಮಳೆ ನೀರು ಸೋರಿಕೆ, ಹೊರಗೆ ಪ್ರಶ್ನೆಪತ್ರಿಕೆ ಸೋರಿಕೆ!
ಬೆಂಗಳೂರು: ಸೋರುತಿಹುದು ಸಂಸತ್ ಮಾಳಿಗೆ, ಅಜ್ಞಾನದಿಂದ, ಭ್ರಷ್ಟರಿಂದ ಸೋರುತಿಹುಹುದು ದೇಶದ ಮಾಳಿಗೆ ಎಂದು ರಾಜ್ಯ ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಪಾರ್ಲಿಮೆಂಟ್ ಒಳಗೆ ಮಳೆ ನೀರು ಸೋರಿಕೆ, ಹೊರಗೆ ಪ್ರಶ್ನೆಪತ್ರಿಕೆ ಸೋರಿಕೆ! 20,000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸೆಂಟ್ರಲ್ ವಿಸ್ತಾ ಎಂಬ ನೂತನ ಸಂಸತ್ ಭವನದ ಒಳಗೆ ಮೊದಲ ವರ್ಷಕ್ಕೆ ಮಳೆ ನೀರು ಸೋರಿಕೆಯಾಗಿದೆ. ಅಚ್ಚೆ ದಿನಗಳ ವಿಕಾಸದಲ್ಲಿ ವಾರಕ್ಕೆ ಮೂರು ಸೇತುವೆಗಳು ಮುರಿದು ಬೀಳುತ್ತಿವೆ, ದಿನಕ್ಕೊಂದು ರೈಲು ಹಳಿ ತಪ್ಪುತ್ತಿವೆ, ರಾಮಮಂದಿರದೊಳಗೆ ನೀರು ಇಳಿಯುತ್ತಿದೆ, ಸಂಸತ್ ಭವನವೂ ಸೋರುತ್ತಿದೆ. ಮೋದಿಯವರ 10 ವರ್ಷದ ಆಡಳಿತದಲ್ಲಿ ಒಂದೇ ಒಂದು ಲೋಪವಿಲ್ಲದ ಕೆಲಸ ಆಗಿದೆಯೇ? ಎಂದು ಪ್ರಶ್ನಿಸಿದ್ದಾರೆ.