ಬೆಳಗಾವಿ: ಮಚ್ಚೆಯಲ್ಲಿ ೨೨೦ ಕೆವಿ ವಿದ್ಯುತ್ ಉಪಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಆಮಂತ್ರಿಸುವಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಶಾಸಕ ಅಭಯ ಪಾಟೀಲ ಹಕ್ಕುಚ್ಯುತಿ ಮಂಡಿಸಿದ್ದಾರೆ.
ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷರಿಗೆ ಪತ್ರ ಸಹ ಕೊಟ್ಟಿದ್ದಾರೆ. ಕಳೆದ ದಿನವಷ್ಟೇ ಶಾಸಕ ಅಭಯ ಪಾಟೀಲ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಕ್ಷೇತ್ರದ ಶಾಸಕರಾಗಿದ್ದ ನಾನು ಮಚ್ಚೆಯ ವಿದ್ಯುತ್ ಉಪ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷನಾಗಿದ್ದೆ. ಆದರೆ ಅಧಿಕಾರಿಗಳು ನನಗೆ ಆಮಂತ್ರಣವನ್ನೇ ನೀಡಲಿಲ್ಲ. ಆದರೆ, ಅದರ ಗುತ್ತಿಗೆದಾರರು ಆಮಂತ್ರಣ ನೀಡಿದ್ದರು. ಮೇಲಾಗಿ ಇದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ನಾನೇ ಅದನ್ನು ಆಗಿನ ಇಂಧನ ಖಾತೆ ಸಚಿವರ ಬಳಿ ಬೆನ್ನು ಬಿದ್ದು ಮಂಜೂರು ಮಾಡಿಸಿಕೊಂಡು ಬಂದಿದ್ದೆ. ಹೀಗಾಗಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ ಅಧಿಕಾರಿಗಳು ನನಗೆ ಆಮಂತ್ರಣ ನೀಡದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದರು.