ಕೊಪ್ಪಳ: ಬಿಜೆಪಿ ತೊರೆದು, ಕಾಂಗ್ರೆಸ್ ಸೇರುವುದಿಲ್ಲ ಎಂದು ರಕ್ತದಲ್ಲಿ ಬರೆದು ಕೊಡಬೇಕು ಎಂದುಕೊಂಡಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಅಂಚೆ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಬಿಜೆಪಿ ಪಕ್ಷ ಬಿಡುವುದಿಲ್ಲ. ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷವು ಟಿಕೆಟ್ ನೀಡುವ ವಿಶ್ವಾಸ ಇದೆ. ಲೋಕಸಭೆಗೆ ಮತ್ತೊಮ್ಮೆ ಸ್ಪರ್ಧೆ ಮಾಡುತ್ತೇನೆ. ನನಗೆ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರ ಪರವಾಗಿ ಕೆಲಸ ಮಾಡುತ್ತೇನೆ. ಹೀಗಾಗಿ ಬಿಜೆಪಿ ಬಿಡುವ ಬಗ್ಗೆ ಮಾಧ್ಯಮದವರು ಮತ್ತೊಮ್ಮ ಪ್ರಶ್ನೆ ಕೇಳಬಾರದು ಎಂದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಸಂಖ್ಯೆಗಳ ಮೇಲೆ ಪ್ರಜಾಪ್ರಭುತ್ವ ಇದೆ. ಸಂಖ್ಯಾಬಲ ಕಡಿಮೆ ಆಗಿದ್ದು, ಬಿಜೆಪಿಯ ಸಂಘಟನೆಯಲ್ಲಿ ಹಿನ್ನೆಡೆ ಉಂಟಾಗಿದೆ. ಕೇಂದ್ರದ ನಾಯಕರು ಸಂಘಟನೆ ಆರಂಭಿಸಲಿದ್ದು, ಮತ್ತೆ ಪಕ್ಷವನ್ನು ಬಲವರ್ಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಶೀಘ್ರ ಪ್ರತಿಪಕ್ಷದ ನಾಯಕರ ಆಯ್ಕೆ ಆಗುತ್ತದೆ ಎಂದು ಶಾಸಕ ದೊಡ್ಡನಗೌಡರ ಬಿಜೆಪಿ ತೊರೆಯುಬ ಕುರಿತು ಪ್ರತಿಕ್ರಿಯಿಸಿದರು.