ಹುಬ್ಬಳ್ಳಿ: ಚುನಾವಣೆಯಲ್ಲಿ ಜನರಿಗೆ ಮೋಸ ಮಾಡಲೆಂದೆ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ಜನರ ವಿಶ್ವಾಸವಿಲ್ಲ. ಅದಕ್ಕೆ ಕಾಡ್೯ ಕೊಡುತ್ತಿದ್ದಾರೆ. ಜನರಿಗೆ ದಾರಿತಪ್ಪಿಸುವ ಹೊಸ ತಂತ್ರವಷ್ಟೆ ಎಂದು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ವರೆಗೂ ಅಷ್ಟೇ ಗ್ಯಾರಂಟಿ ಇರುತ್ತವೆ. ಚುನಾವಣೆ ಬಳಿಕ ಯಾವುದು ಈಡೇರುವುದಿಲ್ಲ. ಇದಕ್ಕೆ ಉದಾಹರಣೆಗೆ ಬೇರೆ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ರಕ್ತದಲ್ಲಿ ಬರೆದುಕೊಡುವ ಅವಶ್ಯಕತೆ ಇಲ್ಲ. ೧೫೦ ಸ್ಥಾನ ಯಾರಿಗೆ ನೀಡಬೇಕು ಎಂಬುದು ಜನ ನಿರ್ಧಾರ ಮಾಡುತ್ತಾರೆ. ನಮಗೆ ಜನರ ಮೇಲೆ ವಿಶ್ವಾಸವಿದೆ. ಸಂಪೂರ್ಣ ಬಹುಮತ ನೀಡುತ್ತಾರೆ ಎಂದರು.
ಅಲ್ಲದೆ ಬಿ.ಎಸ್. ವೈ ಅವರು ಜನರ ನಾಡಿಮಿಡಿತ ಅರಿತಿದ್ದು, ಅವರ ಅನುಭವದ ಪ್ರಕಾರ ಬಿಜೆಪಿ ಹೆಚ್ಚಿನ ಸ್ಥಾನ ಪಡೆದು ಅಧಿಕಾರಕ್ಕೆರಲಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿಯವರು ಸಂವಾದದಲ್ಲಿ ಬೂತ್ ಗೆಲ್ಲುವ ಮೂಲಕ ಕ್ಷೇತ್ರ ಗೆಲ್ಲುವ ಅಂಶವನ್ನು ಒತ್ತಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪಕ್ಷದಲ್ಲಿ ಸಂಘಟನೆ ಮತ್ತು ಚುನಾವಣೆ ತಂತ್ರ ಮಾಡಲಾಗಿದೆ. ಡಬಲ್ ಎಂಜಿನ ಸರ್ಕಾರ ಪೂರಕವಾಗಿದೆ ಎಂಬುದ ಕುರಿತು ಹೇಳಿದ್ದಾರೆ. ಮೂಲಸೌಕರ್ಯ ಸೇರಿದಂತೆ ರಾಜ್ಯದಲ್ಲಿ ನಡೆದ ಅಭಿವೃದ್ಧಿ ಕಾರ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ೭೫ ವರ್ಷದಲ್ಲಿ ೨೫ ಲಕ್ಷ ಮನೆಗಳಿಗೆ ಕುಡಿಯುವ ನೀರು ಕಾಂಗ್ರೆಸ್ ಒದಗಿಸಿತ್ತು. ಆದರೆ ಬಿಜೆಪಿ ಜಲ ಜೀವ ಮಿಷನ್ ಯೋಜನೆಯಲ್ಲಿ ಕಳೆದ ಮೂರು ವರ್ಷ ೪೦ ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸಿದೆ. ಅವರ ಅವಧಿಯಲ್ಲಿ ೫ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯಾಗಿತ್ತು. ಈಗ ಕೇವಲ ಐದು ವರ್ಷದಲ್ಲಿ ೬ ಸಾವಿರ ಕಿ.ಮೀ ಅಭಿವೃದ್ಧಿ ಮಾಡಲಾಗಿದೆ. ಕಿಶಾಸ ಸನ್ಮಾನ ಯೋಜನೆಯಲ್ಲಿ ೧೬ ಸಾವಿರ ಕೋಟಿ ಹಣ ರೈತರ ಖಾತೆಗೆ ಹಾಕಲಾಗಿದೆ. ಬಡವರು, ರೈತರು, ಮಹಿಳೆಯರು, ನೀರು, ರಸ್ತೆ ಹಲವಾರು ವಲಯಗಳಲ್ಲಿ ಅಭಿವೃದ್ಧಿ ಮಾಡಿದ್ದು, ಇದು ಡಬಲ್ ಎಂಜಿನ ಸರ್ಕಾರ ದಿಂದ ಮಾತ್ರ ಸಾಧ್ಯ ಎಂದರು. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ತರುವ ನಿಟ್ಟಿನಲ್ಲಿ ಎಲ್ಲ ನಾಯಕರು ಶ್ರಮವಹಿಸುತ್ತೇವೆ. ಜನರಿಗೂ ನಮ್ಮ ಮೇಲೆ ವಿಶ್ವಾಸವಿದ್ದು ಬಹುಮತ ನೀಡಲಿದ್ದಾರೆ ಎಂದರು.