ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್ಎಸ್ ಕನ್ನಂಬಾಡಿ ಅಣೆಕಟ್ಟೆಗೆ ವಾಟಾಳ್ ನಾಗರಾಜ್ ಮುತ್ತಿಗೆಗೆ ಯತ್ನ ಮಾಡಿದ ಹಿನ್ನೆಲೆ ಅವರನ್ನು ಪೋಲೀಸರು ಬಂಧಿಸಿ ಕರೆದೊಯ್ದ ಘಟನೆ ನಡೆಯಿತು.
ತಮ್ಮ ಬೆಂಬಲಿಗರೊಂದಿಗೆ ಗುರುವಾರ ಸಂಜೆ ಕೆಆರ್ಎಸ್ಗೆ ಆಗಮಿಸಿದ ಅವರು, ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿ ಪೊಲೀಸರೊಂದಿಗೆ ಮಾತಿನ ಚಕಮುಕಿ ನಡೆಸಿ ಅಣೆಕಟ್ಟೆ ಒಳಗೆ ಬಿಡುವಂತೆ ಒತ್ತಾಯಿಸಿದರು.
ಸರ್ಕಾರ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಆಗ್ತಿದೆ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಕಾವೇರಿ ನಮ್ಮದು, ಹೋರಾಟ ನಿರಂತರವಾಗಿ ಇರುತ್ತದೆ. ಪೊಲೀಸ್ ವಾಹನ ಹತ್ತುವ ವೇಳೆ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮನ್ನು ಅಣೆಕಟ್ಟೆಗೆ ಬಿಡದ ನೀವು, ಅದೇಗೆ ರಾಜವಂಶಸ್ಥೆರವರನ್ನು ಬಿಟ್ರಿ ಎಂದು ಪೊಲೀಸರಿಗೆ ಮರು ಪ್ರಶ್ನೆ ಹಾಕಿದರು. ಮೂರು ದಿನಗಳ ಹಿಂದೆಯಷ್ಟೇ ಡ್ಯಾಂಗೆ ಭೇಟಿ ಕೊಟ್ಟು ವೀಕ್ಷಣೆ ಮಾಡಿದ್ದ ಪ್ರಮೋದಾದೇವಿ ಒಡೆಯರ್ ವಿಚಾರ ಪ್ರಸ್ತಾಪ ಮಾಡಿ ಪೊಲೀಸರಿಗೆ ವಾಟಾಳ್ ನಾಗರಾಜ್ ಕ್ಲಾಸ್ ತೆಗೆದುಕೊಂಡರು.
ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರ ಹರಿದು, ಸ್ಟಾಲಿನ್ ಕರ್ನಾಟಕ ರಾಜ್ಯಕ್ಕೆ ಹೆಜ್ಜೆ ಹೆಜ್ಜೆಗೂ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.