ಹುಬ್ಬಳ್ಳಿ: ಎಪಿಎಂಸಿ ಕಾಯ್ದೆ ರದ್ದುಪಡಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ಜುಲೈ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಈ ಬಗ್ಗೆ ವಿಧೇಯಕ ಮಂಡಿಸಿ ರೈತರಿಗೆ ಯೋಗ್ಯ ಬೆಲೆ ಸಿಗುವ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಚೈತನ್ಯ ನೀಡುವಂತಹ ಕಾಯ್ದೆ ಜಾರಿಗೊಳಿಸಲಿದ್ದೇವೆ ಎಂದು ಜವಳಿ, ಕಬ್ಬು, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲ ಕೃಷಿ ಮಾರುಕಟ್ಟೆಗಳ ಪುನಶ್ವೇತನಗೊಳಿಸಲಾಗುವುದು ಎಂದು ಹೇಳಿದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಆದರೆ, ಆಗ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಏನು ಮಾಡಲಿಲ್ಲ. ರೈತರು, ಸಾರ್ವಜನಿಕರು ಹಾಗೂ ವರ್ತಕರು ಹಿಂಪಡೆಯ ಬೇಕು ಆಗ್ರಹ ಮಾಡುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದರು.
ರಾಜ್ಯದಲ್ಲಿ ಹೆಚ್ಚು ಆದಾಯ ತರುವಂತ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗೆ ಒತ್ತುಕೊಡಲಾಗುತ್ತದೆ. ರೈತರಿಗೆ ಯೋಗ್ಯ ಬೆಲೆ ಸಿಗಬೇಕು. ಕಾಯ್ದೆ ತಿದ್ದುಪಡಿ ಮಾಡಿದ್ದರಿಂದ ನಷ್ಟಕ್ಕೆ ಒಳಗಾದವು. ಈಗ ಅದನ್ನು ಪುನರ್ ಆರಂಭಿಸಿದರೆ ಅವಶ್ಯವಾಗಿ ಲಾಭಗಳಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಪಿಎಂಸಿ ಕಾನೂನು ಜಾರಿಯಾದರೆ ಆದಾಯ ಹಾಗೂ ರೈತರಿಗೆ ಯೋಗ್ಯ ಬೆಲೆ ಸಿಗುತ್ತದೆ. ರೈತರ ಬೆಳೆದ ಬೆಳೆಯ ಬಗ್ಗೆ ಗೊಂದಲವಿರುವುದಿಲ್ಲ. ಜವಳಿ ಪಾರ್ಕ್ ತುಮಕೂರ ಕೈ ಬಿಟ್ಟು ಹೋಗಿದೆ. ಜವಳಿ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ. ಇರುವಂತಹ ಬೇಡಿಕೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇಲಾಖೆ ಇದೆ. ನೇಕಾರರಿಗೆ ಪ್ರೋತ್ಸಾಹಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು.