ಬೆಳಗಾವಿ: ಕೊಲ್ಲಾಪುರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗೆ ಶಿವಸೇನೆ ಕಾರ್ಯಕರ್ತರು ಜೈ ಮಹಾರಾಷ್ಟ್ರ ಸ್ಟಿಕ್ಕರ್ ಅಂಟಿಸಿದ ಘಟನೆ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳು ಸದ್ಯ ಬೆಳಗಾವಿಯಿಂದ ನಿಪ್ಪಾಣಿವರೆಗೆ ಮಾತ್ರ ಹೋಗಿ ಬರುತ್ತಿವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ನ್ನು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ತಡೆದು ಪ್ರತಿಭಟನೆ ನಡೆಸಿದರು. ಕೊಲ್ಲಾಪುರದಲ್ಲಿ ಕರ್ನಾಟಕ ರಾಜ್ಯದ ಬಸ್ನ್ನು ಶಿವಸೇನೆಯವರು ತಡೆದಿದ್ದಕ್ಕೆ ಪ್ರತಿಯಾಗಿ, ಮಹಾರಾಷ್ಟ್ರ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಶಿವಸೇನೆ ಪುಂಡಾಟ: ಮಹಾಮೇಳಾವ್ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಶಿವಸೇನೆ ಉದ್ಧವ ಠಾಕ್ರೆ ಬಣದ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ನಿಪ್ಪಾಣಿ ಸಿಪಿಐ ಬಿ.ಎಸ್. ತಳವಾರ ನೇತೃತ್ವದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಬೆಳಿಗ್ಗೆಯಿಂದಲೂ ಕೊಗನೋಳ್ಳಿ ಚೆಕ್ ಪೋಸ್ಟ್ನಲ್ಲಿ ಖಡಕ್ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.






















