ಜನಾರ್ಥನ ರೆಡ್ಡಿ, ಜೋಶಿ ನಿವಾಸಕ್ಕ ಭೇಟಿ ನೀಡಿರುವುದು ಬಿಜೆಪಿ ಪಾಳಯದಲ್ಲಿ ಕಂಪನ
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹುಬ್ಬಳ್ಳಿಯ ನಿವಾಸಕ್ಕೆ ಶುಕ್ರವಾರ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಪ್ರತ್ಯಕ್ಷವಾಗಿದ್ದು ಕುತೂಹಲ ಮೂಡಿಸಿದೆ.
ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸಂಬಂಧ ತೀವೃ ಪೂಪೋಟಿ ನಡೆಯುತ್ತಿರುವಾಗಲೇ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಗಣಿಧಣಿ ಗಾಲಿ ಜನಾರ್ಥನ ರೆಡ್ಡಿ, ಜೋಶಿ ನಿವಾಸಕ್ಕ ಭೇಟಿ ನೀಡಿರುವುದು ಬಿಜೆಪಿ ಪಾಳಯದಲ್ಲಿ ಕಂಪನ ಉಂಟುಮಾಡಿದೆ.
ಅದರಲ್ಲೂ ಹುಬ್ಬಳ್ಳಿಯ ಮಯೂರ ಎಸ್ಟೇಟ್ನ ಪ್ರಹ್ಲಾದ ಜೋಶಿ ನಿವಾಸಕ್ಕೆ ರೆಡ್ಡಿ ಆಗಮಿಸಿದ್ದ ವೇಳೆ ಮಾಧ್ಯಮದವರ ಕಣ್ತಪ್ಪಿಸಲು ಸತಾಯಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಂತರ ಸುಮಾರು ೩೦ ನಿಮಿಷಗಳ ಕಾಲ ಉಭಯ ನಾಯಕರು ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.
ಜೋಶಿ ನಿವಾಸದಿಂದ ಹೊರಬಂದ ರೆಡ್ಡಿ, ಮಾಧ್ಯಮಗಳ ಎದುರು ಪ್ರತ್ಯಕ್ಷವಾಗಿ, ಇದು ಸಹಜ ಭೇಟಿ. ಇದಕ್ಕೆ ರಾಜಕೀಯ ಬಣ್ಣ ಬಳೆಯುವುದು ಬೇಡ. ಮಾರ್ಚ್ ತಿಂಗಳಲ್ಲಿ ನನ್ನ ಮೊಮ್ಮಗನ ನಾಮಕರಣ ಇದೆ. ಅದರ ಆಮಂತ್ರಣ ನೀಡಲು ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಆಗಿಲ್ಲ. ಏನೇ ಬೆಳವಣಿಗೆ ಇದ್ದರೂ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ಸ್ಪಷ್ಟಪಡಿಸಿದರು.