ಮಂಗಳೂರು: ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಭಾರಿ ಗಾತ್ರದ ಹೆಬ್ಬಾವು ಆಡೊಂದನ್ನು ನುಂಗಲು ಸುಮಾರು ಒಂದು ತಾಸು ಸೆಣಸಿ ವಿಫಲಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸ್ಥಳೀಯರಾದ ಜಾರ್ಜ್ ಕುಟ್ಟಿ ಎಂಬುವರಿಗೆ ಸೇರಿದ ಸುಮಾರು 45 ಕೆ.ಜಿ. ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಲುಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಹೆಬ್ಬಾವು ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸೋತು ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟು ಪೊದೆಯೊಳಗೆ ಸೇರಿಕೊಂಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.